ADVERTISEMENT

ಸೆಮಿಸ್ಟರ್‌ ಪದ್ಧತಿ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:53 IST
Last Updated 14 ಡಿಸೆಂಬರ್ 2013, 5:53 IST

ಕೊಪ್ಪಳ: ಪ್ರಸಕ್ತ ವರ್ಷದಿಂದ ಸರ್ಕಾರ ಐ.ಟಿ.ಐ ಕಾಲೇಜುಗಳಿಗೆ ಜಾರಿಗೆ ತರಲು ಉದ್ದೇಶಿಸಿರುವ ಸೆಮಿಸ್ಟರ್‌ ಪದ್ಧತಿಯನ್ನು ಕೈಬಿಡುವಂತೆ ಒತ್ತಾ­ಯಿಸಿ ನಗರದಲ್ಲಿ ಶುಕ್ರವಾರ ವಿದ್ಯಾರ್ಥಿ­ಗಳು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಕಚೇರಿ ಬಳಿ ಜಮಾಯಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ  ಮಾತನಾಡಿದ ಎಐಡಿವೈಓ ಜಿಲ್ಲಾ ಅಧ್ಯಕ್ಷ ಮಾರುತಿ ಹೊಸಮನಿ, ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವ ಮೊದಲು  ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಸಂಘಟನೆಗಳು ಮತ್ತು ಕಾಲೇಜು ಉಪನ್ಯಾಸಕರ ಮಧ್ಯೆ ಚರ್ಚೆ ನಡೆಸಿ, ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಆದರೆ ಸರ್ಕಾರ ಇವೆಲ್ಲ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಐ.ಟಿ.ಐ. ವಿದ್ಯಾರ್ಥಿಗಳ ಮೇಲೆ ಸೆಮಿಸ್ಟರ್‌ ಪದ್ಧತಿ ಹೇರಲು ಮುಂದಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ರಮೇಶ್ ವಂಕಲಕುಂಟಿ  ಸೆಮಿಸ್ಟರ್ ಪದ್ಧತಿ­ಯನ್ನು ಕೈಬಿಟ್ಟು ಮೊದಲಿನ ಪದ್ಧತಿ­ಯನ್ನೇ ಮುಂದುವರೆಸಬೇಕು, ಅಲ್ಲದೆ ನಿರುದ್ಯೋಗಿ ತರಬೇತಿದಾರರಿಗೆ ಉದ್ಯೋಗ ಒದಗಿಸಬೇಕು ಎಂದು ಆಗ್ರಹಿಸಿದರು. ಸೋಮಲಿಂಗಪ್ಪ, ಅಶೋಕ್‌, ಇಮ್ರಾನ್‌ ಸೇರಿ ದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.