ADVERTISEMENT

ಸೋಲಿನ ನಂತರ ಕ್ಷೇತ್ರಕ್ಕೆ ಕಾಲಿಡದ ತಂಗಡಗಿ

ಅಭಿವೃದ್ಧಿ ಮಾಡಿದರೂ ಜನ ಕೈ ಬಿಟ್ಟರು ಎಂಬ ಬೇಸರ, ಬೆಂಗಳೂರು ಸೇರಿದ ಮಾಜಿ ಶಾಸಕ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 13:00 IST
Last Updated 6 ಜೂನ್ 2018, 13:00 IST
ಶಿವರಾಜ ತಂಗಡಗಿ
ಶಿವರಾಜ ತಂಗಡಗಿ   

ಕನಕಗಿರಿ: ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಎರಡು ಸಲ ಆಯ್ಕೆಯಾಗಿ, ಒಮ್ಮೆ ಸಚಿವರಾಗಿದ್ದ ಕಾಂಗ್ರೆಸ್‌ನ ಶಿವರಾಜ ತಂಗಡಗಿ ಈ ಬಾರಿ ಚುನಾವಣೆಯಲ್ಲಿ ಸೋಲುಂಡರು. ನಂತರ ಅವರು ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರ್ಯಕರ್ತರು ದೂರಿದ್ದಾರೆ.

2008ರಲ್ಲಿ ಎಸ್‌.ಸಿ ಮೀಸಲು ಕ್ಷೇತ್ರವಾಗಿದ್ದ ಇಲ್ಲಿಂದ ಬಿಜೆಪಿಯಿಂದ ಸ್ಪರ್ಧಿಸಲು ಬಂದಿದ್ದ ತಂಗಡಗಿಗೆ ಟಿಕೆಟ್ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. ಅದೃಷ್ಟ ಒಲಿದ ಕಾರಣ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದ ಹಿನ್ನೆಲೆಯಲ್ಲಿ ಶಾಸಕತ್ವ ಕಳೆದುಕೊಂಡ ತಂಗಡಗಿ, ಸುಪ್ರೀಂಕೋರ್ಟ್‌ಗೆ ಮೊರೆಹೋಗಿ ಮತ್ತೆ ಶಾಸಕತ್ವ ಪಡೆದುಕೊಂಡು ಅವಧಿ ಪೂರ್ಣಗೊಳಿಸಿದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜಯ ಸಾಧಿಸಿ ಮತ್ತೆ ಸಚಿವರಾದರು.

ಪಥಮ ಸಲ ಕನಕಗಿರಿ ಉತ್ಸವ ಆಚರಣೆ, ₹ 140 ಕೋಟಿ ಮೊತ್ತದ ಕೆರೆಗೆ ನೀರು ತುಂಬಿಸುವ ಯೋಜನೆ, ಕನಕಗಿರಿ, ಕಾರಟಗಿ ತಾಲ್ಲೂಕುಗಳ ಅನುಷ್ಠಾನ, ಕನಕಗಿರಿ. ಕಾರಟಗಿ ಕ್ರಮವಾಗಿ ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿರುವುದು, ರೈಸ್‌ಟೆಕ್ ಪಾರ್ಕ್ ಅಭಿವೃದ್ಧಿ, ನದಿ ಪಾತ್ರದ ಗ್ರಾಮಗಳಲ್ಲಿ ಏತ ನೀರಾವರಿ ಜಾರಿಗೆ, ಕನಕಗಿರಿ, ಕಾರಟಗಿ, ಸಿದ್ದಾಪುರ, ಹೇರೂರು ಸೇರಿದಂತೆ ರಾಜೀವ್ ಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ಅವರ ಅವಧಿಯಲ್ಲಿ ನಡೆದಿವೆ.

ADVERTISEMENT

ಈಚೆಗೆ ನಡೆದ ಚುನಾವಣೆಯ ಪ್ರಚಾರದಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಲಕು ಹಾಕಿದ್ದ ತಂಗಡಗಿ; ಹ್ಯಾಟ್ರಿಕ್‌ ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದರು. ಅನುಕಂಪದ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸುಗೂರ ಗೆಲುವು ಸಾಧಿಸಿದರು. ಇದನ್ನು ಅರಗಿಸಿಕೊಳ್ಳಲಾರದ ತಂಗಡಗಿ ಮೇ 17ರ ನಂತರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ, ಕಾರ್ಯಕರ್ತರಿಗೆ ಯಾವುದೇ ಧೈರ್ಯ ಹೇಳದೆ ಬೆಂಗಳೂರು ಸೇರಿದ್ದಾರೆ ಎನ್ನಲಾಗುತ್ತಿದೆ.

‘ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಜನ ಕೈ ಹಿಡಿಯಲಿಲ್ಲ, ತಮ್ಮ ಟ್ರಸ್ಟ್ ಮೂಲಕ ಶಿಕ್ಷಕರಿಗೆ ಸನ್ಮಾನ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕ್ಷೇತ್ರದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಡೈಜಿಸ್ಟ್‌ ವಿತರಣೆ ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡಿದರೂ ಏಕೆ ಸೋಲಾಯಿತು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಸೋಲಿನ ಆಘಾತದಿಂದ ಇನ್ನೂ ಹೊರಗೆ ಬಂದಿಲ್ಲ’ ಎಂದು ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್‌ ಮುಖಂಡರು ತಿಳಿಸಿದರು.

‘ಈ ಹಿಂದೆ ತಂಗಡಗಿ ವಿರುದದ್ಧ ಎರಡು ಸಲ ಸೋಲುಂಡಿದ್ದ ಮುಕುಂದರಾವ್ ಭವಾನಿಮಠ, ಕಳೆದ ಸಲ ಸೋತಿದ್ದ ಬಸವರಾಜ ದಡೇಸುಗೂರ ಕ್ಷೇತ್ರದಿಂದ ಪಲಾಯನ ಮಾಡಿರಲಿಲ್ಲ. ಸೋಲಿಗೆ ಧೃತಿಗೆಟ್ಟಿರಲಿಲ್ಲ.

ಒಂದು ಸಲ ಸೋತ ಮಾತ್ರ ಇಷ್ಟೊಂದು ಚಿಂತೆ ಮಾಡಬಾರದು. ಏಕೆ ಸೋಲಾಯಿತು ಎಂದು ವಿಮರ್ಶಿಸಿಕೊಂಡು ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸಬೇಕು. ಮುಂದೆ ಯಶಸ್ಸು ಖಂಡಿತ ಸಿಗುತ್ತದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು. ಈ ಕುರಿತು ದೂರವಾಣಿ ಮೂಲಕ ತಂಗಡಗಿ ಅವರನ್ನು ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ.

ಜನ ಬದಲಾವಣೆ ಬಯಸಿದ ಕಾರಣ ಸೋಲಾಗಿದೆ. ಪಕ್ಷದ ಸಂಘಟನೆಗೆ ತಂಗಡಗಿ ಒತ್ತು ನೀಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ
- ರಡ್ಡಿ ಶ್ರೀನಿವಾಸ, ಅಧ್ಯಕ್ಷ, ಕನಕಗಿರಿ ಬ್ಲಾಕ್ ಕಾಂಗ್ರೆಸ್‌ 

ಮೆಹಬೂಬ ಹುಸೇನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.