ADVERTISEMENT

‘ಅರಿವಿನ ಕೊರತೆಯಿಂದ ಅನಾರೋಗ್ಯ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:53 IST
Last Updated 16 ಡಿಸೆಂಬರ್ 2013, 6:53 IST

ಕುಷ್ಟಗಿ: ಆರೋಗ್ಯ ವಿಷಯದಲ್ಲಿ ಅರಿವಿನ ಕೊರತೆ, ಆರೋಗ್ಯಕ್ಕೆ ಪೂರಕ­ವಾದ ಸೂತ್ರಗಳನ್ನು ಪಾಲಿಸದ ಕಾರಣ ರೋಗಗಳು ಹೆಚ್ಚುತ್ತಿವೆ ಎಂದು ಬಾಗಲ­ಕೋಟೆಯ ಮಧುಮೇಹ ರೋಗ ತಜ್ಞ ಡಾ. ಬಾಬುರಾಜೇಂದ್ರ ನಾಯಕ  ಹೇಳಿದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರ 59ನೇ ಜನ್ಮದಿನದ ಅಂಗವಾಗಿ  ಅವರ ಅಭಿಮಾನಿಗಳು ಭಾನುವಾರ ಇಲ್ಲಿನ ಕ್ರೈಸ್ತ್‌ ದ ಕಿಂಗ್‌ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಒತ್ತಡ ಮತ್ತು ಬದಲಾದ ಸಾಂಪ್ರ­ದಾಯಿಕ ಆಹಾರ ಪದ್ಧತಿಯಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು  ಬರುತ್ತಿವೆ ಎಂದರು.

ಸ್ವಚ್ಛ ಪರಿಸರ, ಪರಿಶುದ್ಧ ಕುಡಿಯುವ ನೀರು, ಆರ್ಥಿಕ ಅನುಕೂ­ಲತೆಗೆ ತಕ್ಕಂತೆ ಹಸಿ ತರಕಾರಿ, ಹಣ್ಣುಗಳ ಸೇವನೆ, ದೈಹಿಕ ವ್ಯಾಯಾಮ ಹಾಗೂ ಹಿತ ಮಿತ ಆಹಾರ ಸೇವನೆ ರೂಢಿಯಲ್ಲಿದ್ದರೆ ಯಾವುದೇ ವ್ಯಕ್ತಿ ಆರೋಗ್ಯವಂತನಾಗಿ ಬದುಕಲು ಸಾಧ್ಯ ಎಂದು ಹೇಳಿದರು.

ದಾಳಿಂಬೆ ಬೆಳೆಗಾರರ ಸಂಘದ ರಾಷ್ಟ್ರೀಯ ಘಟಕ ಉಪಾಧ್ಯಕ್ಷ ದೇವೇಂ­ದ್ರಪ್ಪ ಬಳೂಟಗಿ ಮಾತನಾಡಿ, ನಾವು ಮತ್ತು ನಮ್ಮ ಅಕ್ಕಪಕ್ಕದವರೂ ಆರೋಗ್ಯದಿಂದ ಬದುಕಬೇಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ತಜ್ಞ ವೈದ್ಯರಿಂದ ಜನಸಾಮಾನ್ಯರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಬಯ್ಯಾಪುರ ಅಭಿಮಾನಿಗಳ ಪ್ರಯತ್ನ ಸಮಾಜ ಮುಖಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮಾನಾಡಿ, ಸಮಾಜದ ಋಣ ಹಿಂದಿರುಗಿಸುವ ಮೂಲಕ ಪ್ರತಿಯೊಬ್ಬರೂ ಕೃತಜ್ಞತೆ ಮೆರೆಯಬೇಕು. ಸರ್ಕಾರದ ಆರೋಗ್ಯ ಸೇವೆಗಳ ಫಲ ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಸಮಾಜ ಮತ್ತು ಸಂಘಟನೆ­ಗಳು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

ಕ್ರೈಸ್ತ ದ ಕಿಂಗ್‌ ಶಾಲೆಯ ಮುಖ್ಯಸ್ಥ ಫಾದರ್‌ ಅನಿಲಕುಮಾರ,  ಹನಮಂ­ತಪ್ಪ ಚೌಡ್ಕಿ, ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ  ಮಾತನಾಡಿದರು.

ಬಾಗಲಕೋಟೆಯ ಡಾ.ಜಿ.ಎಸ್‌. ಬರಗಿ ಶಿಬಿರ ಉದ್ಘಾಟಿಸಿದರು. ತಜ್ಞ ವೈದ್ಯರಾದ ಡಾ. ಸ್ಮಿತಾ.ಸಿ. ಬರಗಿ, ಡಾ.ಸುನಿಲ್‌, ಡಾ.ಶೀತಲ್‌, ಡಾ. ಎಂ.ಬಿ. ಮೂಲಿಮನಿ, ಡಾ. ಪವನ ದಾರಕ್‌, ಬಾಬುಸಾಬ್‌ ಮೆಣೆದಾಳ ಮತ್ತಿತರರು ಇದ್ದರು.
ಶಿಕ್ಷಕ ಶರಣಪ್ಪ ತೆಮ್ಮಿನಾಳ ನಿರೂಪಿಸಿ ವಂದಿಸಿದರು.

ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಬಂದ ಜನರ ಆರೋಗ್ಯ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.