ADVERTISEMENT

ಕಾರಟಗಿ ಮಾರ್ಯಾದೆಗೇಡು ಹತ್ಯೆ ಪ್ರಕರಣ: ದಂಪತಿ ಕೊಲೆಗೆ ಸಹೋದರನ ಸುಪಾರಿ

ಕಾರಟಗಿ ಮಾರ್ಯಾದೆಗೇಡು ಹತ್ಯೆ ಪ್ರಕರಣ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 2:42 IST
Last Updated 22 ಅಕ್ಟೋಬರ್ 2020, 2:42 IST
ಟಿ.ಶ್ರೀಧರ್
ಟಿ.ಶ್ರೀಧರ್   

ಕೊಪ್ಪಳ: ಕಾರಟಗಿಪಟ್ಟಣದಲ್ಲಿದಂಪತಿ ಮೇಲೆ ಮಾರಣಾಂತಿಕ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಇಬ್ಬರುಆರೋಪಿತರನ್ನು ಬಂಧಿಸ ಲಾಗಿದ್ದು, ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹೇಳಿದರು.

ಬುಧವಾರ ಎಸ್‌ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನವರಾದ ವಿನೋದ್ ವೆಂಕಣ್ಣ ಮಳಲಿ (34) ಮತ್ತು ತ್ರಿವೇಣಿ ಶಿವಾಜಿರಾವ್ ಚಂದನಶಿವ (31) ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ADVERTISEMENT

ಇದೊಂದು ಅಂತರ್ಜಾತಿ ವಿವಾಹವಾದ ಕಾರಣ ಮನೆಯವರ ತೀವ್ರ ವಿರೋಧವಿತ್ತು. ಆದ್ದರಿಂದ ಉದ್ಯೋಗ ಅರಸಿ ಯಲಬುರ್ಗಾ ತಾಲ್ಲೂಕಿನ ಮುಧೋಳಕ್ಕೆ ಬಂದಿದ್ದರು. ನಂತರ ಕಾರಟಗಿಯ ಖಾಸಗಿ ಬ್ಯಾಂಕಿನಲ್ಲಿ ತ್ರಿವೇಣಿ ಕೆಲಸ ಮಾಡುತ್ತಿದ್ದರು ಎಂದು ವಿವರಿಸಿದರು.

ತ್ರಿವೇಣಿ ಅವರ ವಿವಾಹಕ್ಕೆ ಅವರ ಸಹೋದರ ಅವಿನಾಶ ಆಕ್ರೋಶಗೊಂಡು ದಂಪತಿ ಕೊಲೆಗೆ ಸುಫಾರಿ ನೀಡಿದ್ದ. ಕಾರಟಗಿಯ ಚನ್ನಬಸವೇಶ್ವರ ನಗರದಲ್ಲಿ ವಾಸವಾಗಿದ್ದ ದಂಪತಿಯ ಚಲನವಲನ ನೋಡಿಕೊಂಡು ರಾಡ್‌ನಿಂದ ಹಲ್ಲೆ ನಡೆಸಲಾಗಿತ್ತು. ಸ್ಥಳದಲ್ಲಿಯೇ ತ್ರಿವೇಣಿ ಮೃತರಾಗಿದ್ದರು. ವಿನೋದ್ ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ ಎಂದರು.

ಕೊಲೆಯ ರಹಸ್ಯ ಬೇಧಿಸಲು ಸಾಕ್ಷ್ಯಾಧಾರಗಳ ಕೊರತೆಯಿತ್ತು. ಇದಕ್ಕಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ನಮ್ಮ ಪೊಲೀಸರ ಸಮಯಪ್ರಜ್ಞೆ ಮತ್ತು ಸಾಹಸದಿಂದ ಇದೊಂದು ಸುಫಾರಿ ಕೊಲೆ ಎಂದು ಅಂದಾಜಿಸಿ ಎಲ್ಲ ಆಯಾಮಗಳಿಂದ ತನಿಖೆ ನಡೆಸಿ ತ್ರಿವೇಣಿ ಸಹೋದರ ಅವಿನಾಶ್ ಚಂದನಶಿವ, ಯುವರಾಜ್ ನಿಂಬಾಳ್ಳರ್ ಅವರನ್ನು ಬಂಧಿಸಲಾಗಿದೆ. ಇಬ್ಬರು ಸುಫಾರಿ ಕೊಲೆಗಾರರ ಪತ್ತೆ ಕಾರ್ಯ ನಡೆದಿದೆ ಎಂದರು.

ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿ ಅಲ್ಪಾವಧಿಯಲ್ಲೇ ಆರೋಪಿತರ ಗುರುತು ಪತ್ತೆ ಹಚ್ಚಿದ ಕಾರಟಗಿ ಠಾಣೆಯ ಭೀಮಣ್ಣ, ಮಾರುತಿ, ಅಮರಪ್ಪ, ಮಂಜುಸಿಂಗ್, ಶರಣಪ್ಪ, ಶಿವರಾಜ, ಪ್ರಸನ್ನಕುಮಾರ, ಬಸವರಾಜ, ನಾಗರಾಜ, ಕನಕಗಿರಿ ಠಾಣೆ ಸಿಬ್ಬಂದಿ ಶೇಖರ್, ಕೊಟ್ರೇಶ್, ಬೈಲಪ್ಪ, ಅರ್ಜುನ ಅವರಿಗೆ ಬಹುಮಾನ, ಪ್ರಶಂಸಾ ಪತ್ರ ನೀಡಲಾಗುವುದು ಎಂದರು. ಡಿವೈಎಸ್ಪಿ ಆರ್‌.ಎಸ್.ಉಜ್ಜನಕೊಪ್ಪ, ವೆಂಕಟಪ್ಪ ನಾಯಕ, ಸಿಪಿಐಉದಯರವಿ, ಪಿಎಸ್‌ಐ ಅವಿನಾಶ್, ಪ್ರಶಾಂತ ಪಿ.ಎಸ್.ಐ ಕನಕಗಿರಿ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.