ಗಂಗಾವತಿ: ತಾಲ್ಲೂಕಿನ ಆನೆಗೊಂದಿಯ ಮಹಿಳೆಯೊಬ್ಬರನ್ನು ಕೊಲೆಗೈದಿದ್ದ ಅಪರಾಧಿಗೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಪ್ರಕಟಿಸಿದೆ.
2018ರ ಜೂನ್ನಲ್ಲಿ ಆನೆಗೊಂದಿಯ ಡಿ.ಪಿ. ಕುಮಾರಸ್ವಾಮಿ ಎಂಬಾತ ಅದೇ ಗ್ರಾಮದ ಲಕ್ಷ್ಮೀ ಎಂಬುವವರ ಮನೆಗೆ ನುಗ್ಗಿ ಚಿನ್ನದ ತಾಳಿಸರ ಕೊಡುವಂತೆ ಒತ್ತಾಯಿಸಿದ್ದ. ಮಹಿಳೆ ಸರ ಕೊಡದಿದ್ದಾಗ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ್ದರಿಂದ ತೀವ್ರತರ ಗಾಯಗಳಾಗಿ ಮೃತಪಟ್ಟಿದ್ದರು. ಈ ಕುರಿತು ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿ ಜೀವಾವಧಿ ಹಾಗೂ ₹1 ಲಕ್ಷಗಳ ದಂಡವನ್ನು ತೀರ್ಪಿನ ದಿನಾಂಕದಿಂದ ಮೂರು ತಿಂಗಳ ಒಳಗೆ ಮೃತಳ ತಾಯಿಗೆ ನೀಡುವಂತೆ ತಿಳಿಸಿದ್ದಾರೆ.
ದಂಡ ಪಾವತಿಸದಿದ್ದಲ್ಲ 1 ವರ್ಷ ಸಾದಾ ಕಾರಾಗೃಹ, ಹಾಗೂ ಕಲಂ 392ರ ಅಪರಾಧಕ್ಕೆ 7 ವರ್ಷ ಕಾರಾಗೃಹ ಹಾಗೂ ₹10 ಸಾವಿರ ದಂಡವನ್ನು ಮೂರು ತಿಂಗಳಲ್ಲಿ ಭರಿಸಬೇಕು. ದಂಡ ಕಟ್ಟದಿದ್ದಲ್ಲಿ 3 ತಿಂಗಳ ಸಾದಾ ಕಾರಾಗೃಹ ವಾಸ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮೀ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.