ಅಂಜನಾದ್ರಿ (ಗಂಗಾವತಿ): ‘ಅರಣ್ಯದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ, ಸೋಲಾರ್ ಸಂಪರ್ಕ ಕಲ್ಪಿಸಿ ವನ್ಯಜೀವಿಗಳಿಗೆ ನೀರೊದಗಿಸಲಾಗುವುದು’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ತಾಲ್ಲೂಕಿನ ಅಂಜನಾದ್ರಿ ಪರ್ವತಕ್ಕೆ ಶುಕ್ರವಾರ ಭೇಟಿ ನೀಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
‘ಬೇಸಿಗೆಯಲ್ಲಿ ಅರಣ್ಯದಲ್ಲಿಯ ಕೆರೆ, ಕಾಲುವೆ ಹಾಗೂ ಇತರ ಜಲಮೂಲಗಳು ಬತ್ತಿ ಹೋಗುತ್ತವೆ. ಅವುಗಳಿಗೆ ಕೊಳವೆಬಾವಿಗಳ ಮೂಲಕ ನೀರು ಹರಿಸಿ, ಪ್ರಾಣಿಗಳಿಗೆ ನೀರು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಈ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಆದಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು’ ಎಂದು ಹೇಳಿದರು.
‘ಕೊಪ್ಪಳ, ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಂತೆ ಕರಡಿಧಾಮ ನಿರ್ಮಿಸಲಾಗಿದೆ. ಕರಡಿಗಳಿಗೆ ಬೇಕಾಗಿರುವ ವಾತಾವರಣ ನಿರ್ಮಾಣ, ಆಹಾರ, ನೀರಿನ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಂಕೆ ಒಂದಕ್ಕೆ ವನ ಅವಶ್ಯಕತೆ ಇಲ್ಲ. ಚಿರತೆ, ಕರಡಿ ಸೇರಿ ಇತರ ಪ್ರಾಣಿಗಳ ರಕ್ಷಣೆ ಮಾಡುವ ಹೊಣೆ ಇದೆ. ಅವುಗಳಿಗೆ ತೊಂದರೆಯಾಗದಂತೆ ಪ್ರಾಣಿಗಳ ರಕ್ಷಣೆಗೆ ಮುಂದಾಗಲಾಗುವುದು’ ಎಂದು ಹೇಳಿದರು. ನಂತರ ಪಂಪಾಸರೋವರಕ್ಕೆ ತೆರಳಿ, ಅಲ್ಲಿಯ ವಿಜಯಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ತಹಶೀಲ್ದಾರ್ ನಾಗರಾಜ, ಜಿಲ್ಲಾ ಅರಣ್ಯ ಅಧಿಕಾರಿ ಹರ್ಷಾಭಾನು ಪ್ರಮುಖರಾದ ಸಿದ್ಧರಾಮಯ್ಯಸ್ವಾಮಿ, ಎಚ್.ಸಿ.ಯಾದವ ಹಾಗೂ ಗೌರೀಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.