ADVERTISEMENT

`ಆಡಳಿತ ಕೌಶಲ ಬೆಳೆಸಿಕೊಳ್ಳಲು ಸಲಹೆ'

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 6:56 IST
Last Updated 21 ಡಿಸೆಂಬರ್ 2012, 6:56 IST

ಮಳವಳ್ಳಿ: ರಾಜಕೀಯ ಕ್ಷೇತ್ರದಲ್ಲಿ ಶೇ 50ರಷ್ಟು ಅವಕಾಶವನ್ನು ಮಹಿಳೆಯರಿಗೆ ಮೀಸಲಾಗಿಡಲಾಗಿದೆ. ಆದರೆ ಜನಪ್ರತಿನಿಧಿಯ ಗಂಡಂದಿರು ಆಡಳಿತ ನಡೆಸುವಂತಾಗಬಾರದು. ಮಹಿಳೆಯರೇ ಆಡಳಿತ ನಡೆಸುವ ಕೌಶಲ ರೂಢಿಸಿಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆ ನೀಡಿದರು.

ತಾಲ್ಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ನಡೆದ `ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ' ಕುರಿತ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯಗಳು ನಡೆಯುತ್ತಿರುವುದು ಮತ್ತೊಬ್ಬ ಮಹಿಳೆಯಿಂದಲೇ ಆಗಿದ್ದು, ಅದನ್ನು ತಡೆಗಟ್ಟಲು ಕಾನೂನಿನ ಅರಿವು ಪಡೆಯುವುದರ ಜೊತೆಗೆ ಸೌಹಾರ್ದದಿಂದ ಬದುಕುವ ಬಗ್ಗೆ ಚಿಂತಿಸಬೇಕು ಎಂದು ಕಿವಿ ಮಾತು ಹೇಳಿದರು.

ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗುತ್ತಿದ್ದರೂ ಹಲವು ವಿಷಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಜೆಂಎಫ್‌ಸಿ ಕಿರಿಯ ಶ್ರೇಣಿ ನ್ಯಾಯಾಧೀಶ ಜೆ.ವಿ.ಕುಲಕರ್ಣಿ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷೆ ವಿಜಯಮ್ಮಬಸಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕಲಿಂಗಯ್ಯ, ವಕೀಲರಾದ ಮುತ್ತು ರಾಜು, ಮೂರ್ತಿ, ಮಹೇಶ್, ಅಂಗನವಾಡಿ ಮೇಲ್ವಿಚಾರಕಿಯರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT