ಮಳವಳ್ಳಿ: ಕಾಡಿನಿಂದ ನಾಡಿನಕಡೆಗೆ ಬಂದಿರುವ ಐದು ಆನೆಗಳ ಗುಂಪು ತಾಲ್ಲೂಕಿನ ಮಾರ್ಕಾಲು ಆಲದಹಳ್ಳಿ ಗ್ರಾಮಗಳ ಬಳಿ ಜಮೀನಿನನಲ್ಲಿ ಶುಕ್ರವಾರ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕಮೂಡಿಸಿವೆ.
ತಾಲ್ಲೂಕಿನಲ್ಲಿ ಹಲವು ತಿಂಗಳುಗಳಿಂದ ಪದೆ ಪದೇ ಕಾಡಾನೆಗಳು ಗ್ರಾಮಾಂತರ ಪ್ರದೇಶಗಳ ಜಮೀನಿಗೆ ಬಂದು ರೈತರು ಬೆಳೆದ ಬೆಳೆಯನ್ನು ಹಾನಿಮಾಡುತ್ತಿದ್ದು, ಶುಕ್ರವಾರ ಮಾರ್ಕಾಲು ಆಲದಹಳ್ಳಿ ಬಳಿ ಬತ್ತದ ಬೆಳೆಯನ್ನು ತುಳಿದು ಹಾನಿಮಾಡಿವೆ.
ಗುರುವಾರ ಚೊಟ್ಟನಹಳ್ಳಿ ಬಳಿ ಪ್ರತ್ಯಕ್ಷವಾಗಿದ್ದ ಈ ಆನೆಗಳ ಗುಂಪು ಸಂಜೆ ಮಾರೇಹಳ್ಳಿ, ಮೂಗನಕೊಪ್ಪಲು ಜಮೀನುಗಳ ಮೂಲಕ ಮಾರ್ಕಾಲು ಬಳಿಗೆ ಬಂದು ಸೇರಿಬಿಟ್ಟಿವೆ. ಈ ಪ್ರದೇಶಕ್ಕೆ ಸಮೀಪ ಯಾವುದೇ ಅರಣ್ಯ ಪ್ರದೇಶವೇ ಇಲ್ಲದಿರುವುದರಿಂದ ಆನೆಗಳನ್ನು ಕಾಡಿಗೆ ಓಡಿಸುವ ಕೆಲಸ ಪ್ರಯಾಸಪಡಬೇಕಾಯಿತು.
ಕೆಲವು ತಿಂಗಳ ಹಿಂದೆ ಎರಡು ಆನೆಗಳು ಈ ಗ್ರಾಮದ ಪಕ್ಕದ ಕೋರೇಗಾಲಕ್ಕೆ ಬಂದು ನಂತರ ಮೈಸೂರು ನಗರದಲ್ಲಿ ಪ್ರತ್ಯಕ್ಷವಾಗಿ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು. ಶುಕ್ರವಾರವೂ ಸಹ ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.