ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧೆ ಬಯಸಿ ಶ್ರೀರಂಗಪಟ್ಟಣದ ಕೆ. ಬಲರಾಮ ಎಂಬುವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಉಮೇದುವಾರಿಕೆ ಸಲ್ಲಿಸಲು ಆ. 3 ಕೊನೆಯ ದಿನವಾಗಿದೆ. ಈವರೆವಿಗೂ ಸಲ್ಲಿಕೆ ಆಗಿರುವ ಏಕೈಕ ನಾಮಪತ್ರವು ಅವರದಾಗಿದೆ.
ಆಯುಧ ಒಪ್ಪಿಸಲು ಸೂಚನೆ :ಸಾರ್ವಜನಿಕರು ಆಯುಧಗಳನ್ನು ಹೊಂದಿದ್ದರೆ, ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ತಿಳಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಆ. 27ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಅಬಕಾರಿ ದಾಳಿ: 6 ಮೊಕದ್ದಮೆ ದಾಖಲು: ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ದಾಳಿ ನಡೆಸಿರುವ ಅಬಕಾರಿ ಪೊಲೀಸ್ ಅಧಿಕಾರಿಗಳು ಜು. 31ಕ್ಕೆ ಕೊನೆಗೊಂಡಂತೆ ಒಟ್ಟು ಆರು ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ 1 ಘೋರ, 1 ಸಾಮಾನ್ಯ ಹಾಗೂ 4 ಮೊಕದ್ದಮೆಗಳನ್ನು 15(ಎ)ರಡಿ ದಾಖಲಿಸಲಾಗಿದೆ.
ದಾಳಿ ಸಂದರ್ಭದಲ್ಲಿ 15.88 ಲೀ ಅಕ್ರಮ ಮದ್ಯ ಹಾಗೂ 6.88 ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ. ನಾಲ್ಕು ಅರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲೆ ಅಬಕಾರಿ ಉಪ ಆಯುಕ್ತರಾದ ಹೆಚ್.ಎನ್.ಆನಂದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.