ಮದ್ದೂರು: ಇಳುವರಿ ಆಧರಿತ ಕಬ್ಬು ದರ ನಿಗದಿಗೆ ಆಗ್ರಹಿಸಿ ಸೋಮವಾರ ರೈತಸಂಘದ ಕಾರ್ಯಕರ್ತರು, ತಾಲ್ಲೂಕಿನ ಕೊಪ್ಪ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ದರನಿಗದಿ ಮಾಡದೇ ಕಾರ್ಖಾನೆ ಆರಂಭಿಸಿರುವ ಆಡಳಿತ ಮಂಡಳಿ ಕ್ರಮ ಖಂಡಿಸಿದ ರೈತರು ಘೋಷಣೆ ಮೊಳಗಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಆಡಳಿತ ಕಚೇರಿ ಎದುರು ಕಾರ್ಯಕರ್ತರು ಧರಣಿ ನಡೆಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ಮುಖ್ಯಮಂತ್ರಿಗಳ ನೇತೃತ್ವದ ಕಬ್ಬುದರ ನಿಗದಿ ಸಭೆಯಲ್ಲಿ ಖಾಸಗಿ ಕಾರ್ಖಾನೆಗಳು ಇಳುವರಿ ಆಧಾರದಲ್ಲಿ ಕಬ್ಬಿನ ದರ ನಿಗದಿಗೊಳಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು.
ಆದರೆ, ಕೊಪ್ಪ ಕಾರ್ಖಾನೆ ಈ ನಿರ್ಣಯವನ್ನು ಉಲ್ಲಂಘಿ ಸಿ ಕಬ್ಬು ಅರೆಯಲು ಮುಂದಾಗಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು.
ಅಷ್ಟರಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮನಗೋಲಿ, ಉಪ ವ್ಯವಸ್ಥಾಪಕ ಸಿದ್ದರಾಮೇಗೌಡ ಉದ್ರಿಕ್ತ ರೈತರನ್ನು ಸಮಾಧಾನಪಡಿಸಿದರು. ಮುಖ್ಯಮಂತ್ರಿಗಳ ನಿರ್ಣಯಕ್ಕೆ ತಾವು ಬದ್ಧರಿದ್ದು, ಸೆ.19ರಂದು ಸರ್ಕಾರ ನಿಗದಿಗೊಳಿಸುವ ಅಂತಿಮ ದರವನ್ನು ನೀಡಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.