ಶ್ರೀರಂಗಪಟ್ಟಣ: ಪಟ್ಟಣದ ಚೆಕ್ಪೋಸ್ಟ್ ಬಳಿಯ ಆನೆಕೋಟೆ ಪ್ರದೇಶದಲ್ಲಿ, ಕೋಟೆಗೆ ಹೊಂದಿಕೊಂಡಿರುವ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಉದ್ಯಾನ ನಿರ್ಮಿಸಲು ಸಿದ್ಧತೆ ನಡೆಸಿದೆ.
₹ 98.25 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೋಟೆ ಹಾಗೂ ಕಂದಕವನ್ನು ಒಳಗೊಂಡಂತೆ ಹಸರೀಕರಣ ಮಾಡಲು ಇಲಾಖೆ ಮುಂದಾಗಿದೆ. ಗೊತ್ತುಪಡಿಸಿರುವ ಜಾಗವನ್ನು ಸಮತಟ್ಟು ಮಾಡುವ ಕೆಲಸ ಈಗಾಗಲೇ ಶುರುವಾಗಿದೆ.ಮುಳ್ಳುಕಂಟಿಗಳನ್ನು ಕಡಿದು ಹಸನು ಮಾಡಲಾಗುತ್ತಿದೆ. ಕೋಟೆ ಮತ್ತು ಕಂದಕಗಳ ಅಂದ ಹೆಚ್ಚಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಇಲಾಖೆ ಅಡಿ ಇಟ್ಟಿದೆ.
‘ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಸಮೀಪವೇ ಉದ್ಯಾನ ನಿರ್ಮಿಸಿ ಕಾವೇರಿ ನದಿಯಿಂದ ನೀರು ತರುವ ಯೋಜನೆ ಇಟ್ಟುಕೊಳ್ಳಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಾಗಿದೆ. ಸಾಧ್ಯವಾಗದಿದ್ದರೆ ಕೋಟೆಯ ಪಕ್ಕದಲ್ಲಿ ಕೊಳವೆ ಬಾವಿ ಕೊರೆಸುವ ಚಿಂತನೆ ನಡೆದಿದೆ. ಇನ್ನು 6 ತಿಂಗಳಲ್ಲಿ ಲ್ಯಾಂಡ್ ಸ್ಕೇಪಿಂಗ್, ತಂತಿಬೇಲಿ ನಿರ್ಮಾಣ ಹಾಗೂ ಇಂಟರ್ಲಾಕ್ ವ್ಯವಸ್ಥೆ ರೂಪುಗೊಳ್ಳಲಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಯಡಿಎಲ್)ಕ್ಕೆ ಕಾಮಗಾರಿಯ ಉಸ್ತುವಾರಿ ವಹಿಸಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುತ್ತೇವೆ. ನದಿಯಿಂದ ಪೈಪ್ ಮೂಲಕ ನೇರೆತ್ತುವ ಉದ್ದೇಶ ಇದೆ. ಸಕಾಲಕ್ಕೆ ನೀರಿನ ಸೌಕರ್ಯ ಸಿಕ್ಕಿ ಅಂದುಕೊಂಡಂತೆ ನಡೆದರೆ ಬರುವ ಜೂನ್ ವೇಳೆಗೆ ಕೋಟೆ, ಕಂದಕ ಮತ್ತು ಉದ್ಯಾನಗಳ ವೀಕ್ಷಿಸಲು ಪ್ರವಾಸಿಗರಿಗೆ ಅನುವು ಮಾಡಿಕೊಡಲಾಗುವುದು’ ಎಂದು ಕೆಆರ್ಐಡಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಮರನಾಥ್ ಹೇಳುತ್ತಾರೆ.
ದೋಣಿ ವಿಹಾರ: ಇದೇ ಸ್ಥಳದಲ್ಲಿರುವ ಕಂದಕದಲ್ಲಿ ಸ್ಥಳೀಯ ಪುರಸಭೆ ದೋಣಿ ವಿಹಾರ ಆರಂಭಿಸಲು ಉದ್ದೇಶಿಸಿದೆ. ಕಂದಕದ ಒಳಗೆ ಸುಮಾರು 100 ಮೀಟರ್ ಉದ್ದ ನೀರು ನಿಲ್ಲಿಸಿ ದೋಣಿ ವಿಹಾರ ಶುರು ಮಾಡಲಾಗುವುದು. ಇದಕ್ಕೆ ಅವಕಾಶ ಕೋರಿ ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆಯಲಾಗಿದೆ. ಸ್ಮಾರಕದ ಅಸ್ಥಿತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು.
ಅನುಮತಿ ಸಿಗುವ ವಿಶ್ವಾಸವೂ ಇದೆ. ದೋಣಿ ವಿಹಾರಕ್ಕೆ ಸುಮಾರು ₹ 10 ಲಕ್ಷ ವೆಚ್ಚದ ಬೇಕಾಗುತ್ತದೆ. ಅದನ್ನು ಭರಿಸಲು ಪುರಸಭೆ ಸಿದ್ಧವಿದೆ. ದೋಣಿ ವಿಹಾರದಿಂದ ಆದಾಯ ನಿರೀಕ್ಷಿಸಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.