ADVERTISEMENT

ದರ್ಶನ್, ಬೆಂಬಲಿಗರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 7:05 IST
Last Updated 22 ಜೂನ್ 2011, 7:05 IST

ಶ್ರೀರಂಗಪಟ್ಟಣ: ಬೈಕ್ ಹಿಂದಿಕ್ಕಿದರು ಎಂಬ ಕ್ಷುಲ್ಲಕ ಕಾರಣಕ್ಕೆ ದರ್ಶನ ಬೆಂಬಲಿಗರು ಸ್ಥಳೀಯರಿಗೆ ಬೆದರಿಕೆ ಹಾಕಿದ್ದಲ್ಲದೇ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ನಗುವನಹಳ್ಳಿ ಗೇಟ್ ಬಳಿ ಮಂಗಳವಾರ ನಡೆದಿದೆ.

ಈ ಸಂಬಂಧ ಸ್ಥಳೀಯರು ಹಾಗೂ ದರ್ಶನ ಬೆಂಬಲಿಗರ ನಡುವೆ ಸಾಕಷ್ಟು ವಾಗ್ವಾದ ಸಹ ನಡೆದಿದೆ. ಈ ಮಧ್ಯದಲ್ಲಿಯೇ ಆಗಮಿಸಿದ ದರ್ಶನ ತಮ್ಮವರ ಪರ ಮಾತನಾಡಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ದರ್ಶನ್ ಅವರು ತಮ್ಮ ಬೆಂಬಲಿ ಗರು ಹಾಗೂ ಸಿನಿಮಾ ಸಾಹಸ ನಿರ್ದೇಶಕರ ಜತೆ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಈ ಪ್ರಕರಣ ನಡೆದಿದೆ.

ಘಟನೆಯ ವಿವರ: ನಗುವನಹಳ್ಳಿ ಗೇಟ್ ಬಳಿ ಪಟ್ಟಣದ ಜೆಕೆ ಟೈರ್ಸ್‌ ಕಾರ್ಮಿಕರಾದ ನಾರಾಯಣ ಮತ್ತು ಆದಿಶೇಷ ಎಂಬುವವರು ತಮ್ಮ ಬೈಕ್‌ನಲ್ಲಿ ಚಲನಚಿತ್ರ ಸಾಹಸ ನಿರ್ದೇಶಕ ರಾದ ರವಿವರ್ಮ ಹಾಗೂ ಚಿನ್ನಯ್ಯ ಅವರು ಪ್ರಯಾಣಿಸುತ್ತಿದ್ದ ಟಾಟಾ ಸಫಾರಿ ಕಾರನ್ನು ಹಿಂದಿಕ್ಕಿದ್ದಾರೆ.

ಇದರಿಂದ ಅಸಮಾಧಾನಗೊಂಡ ರವಿವರ್ಮ ಮತ್ತು ಚಿನ್ನಯ್ಯ ಬೈಕ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿ ನಾರಾಯಣ ನನ್ನು ಥಳಿಸಿದ್ದಾರೆ. ಸ್ಥಳೀಯರು ಗುಂಪುಗೂಡುವ ಹೊತ್ತಿಗೆ ರವಿವರ್ಮ ಕಾರಿನ ಸಹಿತ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿ ನಾಗರಾಜು ತಿಳಿಸಿದ್ದಾರೆ.

ಸ್ಥಳೀಯರ ಕೈಗೆ ಸಿಕ್ಕ ಚಿನ್ನಯ್ಯ ಅವರನ್ನು ಪಟ್ಟಣದ ಸಾಯಿಸೇವಾ ಆಶ್ರಮದಲ್ಲಿ ಕೂರಿಸಿ ದಿಗ್ಬಂಧನ ಹಾಕಲಾಗಿತ್ತು. ಆ ವೇಳೆಗೆ ವಿಷಯ ತಿಳಿದ ದರ್ಶನ್ ವಾಪಸ್ ಬಂದಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ದರ್ಶನ್ ಎರಡೂ ಕಡೆಯವರನ್ನು ಕೂರಿಸಿ ರಾಜಿ ಮಾಡುವ ಯತ್ನ ನಡೆಸಿದರು. ಒಂದು ಹಂತದಲ್ಲಿ `ಹೋಗಲಿ ಬಿಟ್ಟುಬಿಡಿ~ ಎಂದು ದರ್ಶನ್ ಹೇಳಿದ ಮಾತಿನಿಂದ ಕೆರಳಿದ ಸ್ಥಳೀಯರು ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೂಂಡಾಗಳ ರೀತಿ ವರ್ತಿಸಿರುವ ನಿಮ್ಮ ಕಡೆಯವರಿಗೆ ಬುದ್ಧಿವಾದ ಹೇಳಿ ಎಂದು ತಿರುಗೇಟು ನೀಡಿದರು. ದರ್ಶನ್ ಅಲ್ಲಿಂದ ತೆರಳಿದ ನಂತರ ಪುರಸಭೆ ಸದಸ್ಯ ಎಸ್.ಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್ ಇತರರು ರಾಜಿ ಮಾಡಿಸಿದರು. ಘಟನೆಯಲ್ಲಿ ನಾರಾ ಯಣ ತಮ್ಮ ಚಿನ್ನದ ಸರ ಹಾಗೂ ಮೊಬೈಲ್ ಕಳೆದುಕೊಂಡಿದ್ದಾರೆ. ಪ್ರಕರಣ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.