ಶ್ರೀರಂಗಪಟ್ಟಣ: ‘ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಕನ್ನಡ ನಾಡಿನ ಶ್ರೇಷ್ಠರಾದ ಕುವೆಂಪು ಹಾಗೂ ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ನಿಜಕ್ಕೂ ಆತಂಕಕಾರಿ ಸಂಗತಿ’ ಎಂದು ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಿ. ಪುಟ್ಟಸ್ವಾಮಿ ಹೇಳಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ 62ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲೆಡೆ ರಾಜ್ಯೋತ್ಸವ ನಡೆಯುತ್ತಿರುವ ಈ ಹೊತ್ತಿನಲ್ಲಿ ಪಾಪು ಅವರು ಸ್ವತಃ ಕನ್ನಡಿಗರಾಗಿದ್ದು, ಕನ್ನಡತನವನ್ನೇ ಉಸಿರಾಗಿಸಿಕೊಂಡಿದ್ದ ನಾಡಿನ ಇಬ್ಬರು ಮೇರು ವ್ಯಕ್ತಿಗಳನ್ನು ಟೀಕಿಸಿರುವುದು ಟೀಕಿಸಿರುವುದು ಸರಿಯಲ್ಲ. ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತಮ್ಮ ಘನತೆಯನ್ನು ತಾವೇ ಕಳೆದುಕೊಂಡಿದ್ದಾರೆ. ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬಂತೆ ಮಾತನಾಡಿದ್ದಾರೆ. ಮತ್ತೆ ಇಂತಹ ಹೇಳಿಕೆ ನೀಡದಂತೆ ಅವರು ಎಚ್ಚರ ವಹಿಸಬೇಕು’ ಎಂದರು.
ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್ ಮಾತನಾಡಿ, ‘ಕನ್ನಡ ನಾಡಿನ ರಾಜಧಾನಿಯಲ್ಲಿ ಈ ನೆಲದ ಭಾಷೆ ತನ್ನ ಸೊಗಡು ಕಳೆದುಕೊಳ್ಳುತ್ತಿದೆ. ಹಳ್ಳಿಗಳಲ್ಲಿ ಕೂಡ ಇಂಗ್ಲಿಷ್ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳನ್ನು ಉಳಿಸಬೇಕು’ ಎಂದು ಹೇಳಿದರು. ಹಿರಿಯ ವಕೀಲ ಎಂ. ಪುಟ್ಟೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಟಿ.ಎಂ. ಹೊಸೂರು ಗೇಟ್ ಬಳಿಯ ಮಹಾಕಾಳಿ ದೇವಾಲಯದ ಗುರುದೇವ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಂ, ತಾಲ್ಲೂಕು ಘಟಕದ ಅಧ್ಯಕ್ಷ ಚಂದಗಾಲು ಶಂಕರ್, ನೇಗಿಲ ಯೋಗಿ ಒಕ್ಕಲಿಗರ ಸಂಘದ ಅಧ್ಯಕ್ಷ ನಿಂಗೇಗೌಡ, ಗಂಜಾಂ ಕೃಷ್ಣಪ್ಪ, ಸಯ್ಯದ್ ಕಾಬೂಲ್, ಕುಬೇರಪ್ಪ, ಸಿ.ಎಸ್. ವೆಂಕಟೇಶ್, ಕೂಡಲಕುಪ್ಪೆ ಸೋಮಶೇಖರ್ ಇದ್ದರು. ಜಿ.ಎನ್. ರವೀಶ್ಗೌಡ, ಮರಿಸ್ವಾಮಿಗೌಡ, ಡಾ.ಮಾರುತಿ. ಮಾಧವಗೌಡ, ಮಹದೇವ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.