ADVERTISEMENT

ಬತ್ತ ಸಂಗ್ರಹಿಸಲು ಸ್ಥಳದ ಕೊರತೆ: ಅಧಿಕಾರಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:20 IST
Last Updated 11 ಫೆಬ್ರುವರಿ 2012, 10:20 IST

ಶ್ರೀರಂಗಪಟ್ಟಣ: ಒಂದು ವಾರದಿಂದ ಬತ್ತ ಖರೀದಿ ಕೇಂದ್ರಕ್ಕೆ ಆವಕ ಹೆಚ್ಚಾಗಿದ್ದು, ಸಂಗ್ರಹಿಸಲು ಸ್ಥಳಾವಕಾಶ ಇಲ್ಲದೆ ಅಧಿಕಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

  ಕಳೆದ ವರ್ಷ 48 ಕ್ವಿಂಟಲ್ ಬತ್ತ ಮಾತ್ರ ಖರೀದಿ ಕೇಂದ್ರಕ್ಕೆ ಬಂದಿತ್ತು. ಆದರೆ ಈ ಬಾರಿ ಸುಗ್ಗಿ ಮುಗಿದು ಎರಡು ತಿಂಗಳಾದರೂ ಖರೀದಿ ಕೇಂದ್ರಕ್ಕೆ ರೈತರು ಬತ್ತ ತರುತ್ತಲೇ ಇದ್ದಾರೆ. ಸರ್ಕಾರ ಬೆಂಬಲ ಬೆಲೆಯನ್ನು ರೂ.100ರಿಂದ 250ಕ್ಕೆ ಹೆಚ್ಚಿಸಿದ್ದರಿಂದ ಬೆಳೆಗಾರರು ಆಕರ್ಷಿತರಾಗಿದ್ದಾರೆ. ಪಟ್ಟಣದ ಆಹಾರ ನಿಗಮದ ಗೋದಾಮಿನಲ್ಲಿ 8,500 ಚೀಲ, ಗಂಜಾಂನಲ್ಲಿ 3,500 ಚೀಲ, ಪಾಲಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಗೋದಾಮಿನಲ್ಲಿ 10,500 ಚೀಲ ಬತ್ತ ಸಂಗ್ರಹಿಸಿ ಇಡಲಾಗಿದೆ. ಗಂಜಾಂನಲ್ಲಿ ಗೋದಾಮಿನ ಗೋಡೆ ಕುಸಿದಿದೆ.

ಪಟ್ಟಣದ ರಂಗನಾಥ ಕಲ್ಯಾಣ ಮಂಟಪದಲ್ಲಿ 3,000 ಚೀಲಗಳಷ್ಟು ಬತ್ತ ಶೇಖರಿಸಿದ್ದು, ಅಲ್ಲಿಯೂ ಸ್ಥಳ ಇಲ್ಲದಂತಾಗಿದೆ ಎಂದು ಬತ್ತ ಖರೀದಿ ಕೇಂದ್ರದ ವ್ಯವಸ್ಥಾಪಕ ಮುನಿರಾಜು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.  ಬತ್ತ ಖರೀದಿಗೆ ಸಿಬ್ಬಂದಿ ಕೊರತೆಯೂ ಇದೆ. ಇಬ್ಬರು ಸಿಬ್ಬಂದಿ ದಂಡಿಯಾಗಿ ಬರುತ್ತಿರುವ ಬತ್ತ ಖರೀದಿಸಲು, ಲೆಕ್ಕಪತ್ರ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಖರೀದಿ ಕೇಂದ್ರದಲ್ಲಿ ಕ್ವಿಂಟಲ್ ಬತ್ತಕ್ಕೆ ರೂ.350 ಹೆಚ್ಚು ಬೆಲೆ ಇರುವುದರಿಂದ ರೈತರು ಉತ್ಸಾಹದಿಂದ ಬತ್ತ ಸರಬರಾಜು ಮಾಡುತ್ತಿದ್ದಾರೆ. ಪೂರೈಕೆಗೆ ತಕ್ಕಂತೆ ಸಿಬ್ಬಂದಿ ಮತ್ತು ಸ್ಥಳಾವಕಾಶ ಕಲ್ಪಿಸಬೇಕು ಎಂದು ಮುನಿರಾಜು ಕೋರಿದ್ದಾರೆ.

ತಾಂತ್ರಿಕ ಕೋರ್ಸ್: ಅರ್ಜಿ ಆಹ್ವಾನ
ಮಂಡ್ಯ:
ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶನಾಲಯ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಿವಿಧ ತಾಂತ್ರಿಕ ಕೋರ್ಸ್‌ಗಳಲ್ಲಿ 4 ತಿಂಗಳ ಅವಧಿ ತರಬೇತಿ ನೀಡಲಿದ್ದು, ಅರ್ಜಿ ಕರೆದಿದೆ.
ಅಭ್ಯರ್ಥಿಗಳು ಮಾಹಿತಿಗೆ ದೂರವಾಣಿ  08232-236211 ಮೊಬೈಲ್ 74110 33233 ಸಂಪರ್ಕಿಸಲು ಹೇಳಿಕೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.