ಮೇಲುಕೋಟೆ: ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆದ ದೀಪಾವಳಿ ಹಬ್ಬದಂದು ಸಹಸ್ರಾರು ಭಕ್ತರು ಭಾಗಿಯಾಗಿ ದೇವರ ದರ್ಶನ ಪಡೆದರು.
ಕೊನೆಯ ದಿನವಾದ ಬಲಿಪಾಡ್ಯಮಿಯಂದು ಸಂಜೆ ಚೆಲುವನಾರಾಯಣಸ್ವಾಮಿಗೆ ಶೇಷವಾಹನೋತ್ಸವ ವೈಭವದಿಂದ ನೆರವೇರಿತು. ಸರ್ಪವಾಹನದಲ್ಲಿ ಶ್ರೀದೇವಿ ಭೂದೇವಿಯರೊಂದಿಗೆ ಅಲಂಕೃತನಾದ ಚೆಲುವನಾರಾಯಣಸ್ವಾಮಿ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಮಂಗಳವಾದ್ಯ ಮತ್ತು ವೇದ ಪಾರಾಯಣದೊಂದಿಗೆ ಅಭಿಷೇಕ ನೆರವೇರಿತು.
ನರಕಚತುರ್ದಶಿ ದಿನ ಸಹ ಬೆಳಗಿನ 4ಕ್ಕೆ ಸ್ವಾಮಿಗೆ ಅಭಿಷೇಕ ನೆರವೇರಿತು. ರಾತ್ರಿ ದೀಪಾವಳಿ ಮಂಟಪಕ್ಕೆ ಉತ್ಸವ ನೆರವೇರಿತು. ಅಲ್ಲಿ 2ನೇ ಸ್ಥಾನೀಕರ ಪೂಜೆಗಳು ನೆರವೇರಿದ ನಂತರ ದೇವಾಲಯದ ನಾಲ್ಕೂ ಮಂದಿ ಸ್ಥಾನೀಕರಿಗೆ ಮಾಲೆ ಮರ್ಯಾದೆ ನಡೆದವು. ವಿಶೇಷ ನಾದಸ್ವರ ವಾದನ ಸೇವೆ ಮತ್ತು ನಾಡಪಟಾಕಿಗಳ ವೈವಿಧ್ಯಮಯ ಚಿತ್ತಾರದೊಂದಿಗೆ ಉತ್ಸವ ನೆರವೇರಿತು.
ಚತುರ್ದಶಿಯ ದಿನದ ದೀಪಾವಳಿ ಉತ್ಸವವನ್ನು ಸವಿತಾ ಸಮಾಜದವರು, ತಮ್ಮ ಗುರುಗಳಾದ 2ನೇ ಸ್ಥಾನೀಕರ ನೇತೃತ್ವದಲ್ಲಿ ದೀಪಾವಳಿ ವೈಭವದಿಂದ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.