ADVERTISEMENT

ರಸಗೊಬ್ಬರ ಬೆಲೆ ಏರಿಕೆ:ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 6:20 IST
Last Updated 10 ಸೆಪ್ಟೆಂಬರ್ 2011, 6:20 IST

ಶ್ರೀರಂಗಪಟ್ಟಣ: ಇಫ್ಕೊ ಸೇರಿದಂತೆ ವಿವಿಧ ಹೆಸರಿನ ರಸಗೊಬ್ಬರ ಬೆಲೆ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಸುಮಾರು ಅರ್ಧತಾಸು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆಯಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ರಸಗೊ ಬ್ಬರ ಬೆಲೆ ಏರಿಸುವ ಮೂಲಕ ಸರ್ಕಾ ರಗಳು ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ದುಸ್ಥಿತಿಗೆ ದೂಡುತ್ತಿವೆ. ತೆರಿಗೆ ವಂಚಕರು, ರಸಗೊಬ್ಬರ ಉತ್ಪನ್ನ ಕಂಪೆನಿಗಳಿಗೆ ಅನುಕೂಲ ಮಾಡಿಕೊಡ ಲಾಗುತ್ತಿದೆ. ಇಫ್ಕೊ, ಯೂರಿಯಾ ಇತರ ರಸಗೊಬ್ಬರಗಳ ಬೆಲೆ ತೀವ್ರ ಹೆಚ್ಚಳವಾಗಿದ್ದು, ರೂ.415 ಇದ್ದ ಇಫ್ಕೊ ಬೆಲೆ ರೂ.730ಕ್ಕೆ ಏರಿಕೆಯಾಗಿದೆ. ರಸಗೊಬ್ಬರ ಬೆಲೆಯನ್ನು ಇಳಿಸಬೇಕು ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅಗ್ರಹಿಸಿದರು.

ರಸಗೊಬ್ಬರ ಬೆಲೆ ಇಳಿಸುವಂತೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು ಬೆಲೆ ಇಳಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ ಎಂ.ಸಿ. ನಾಗರಾಜು, ಬಿ.ಎಸ್.ರಮೇಶ್, ಪಾಂಡು, ಯತೀಶ್, ಕಿರಂಗೂರು ಮಹದೇವು, ನಾಗೇಂದ್ರು, ನೆಲಮನೆ ಕಾಳೇಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಖಂಡನೆ: ರಸಗೊಬ್ಬರ ಬೆಲೆ ಹೆಚ್ಚಳ ಕ್ರಮವನ್ನು ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್ ಖಂಡಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ರಸಗೊಬ್ಬರ ಬೆಲೆ ಇಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.