ADVERTISEMENT

ವೈದ್ಯರ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 8:33 IST
Last Updated 7 ಮಾರ್ಚ್ 2014, 8:33 IST

ಮಂಡ್ಯ: ವಿದ್ಯಾನಗರದಲ್ಲಿರುವ ಮಂಗಳ ದಂತ ಚಿಕಿತ್ಸಾಲಯದ ವೈದ್ಯರಾದ ಡಾ.ವೈ.ಎಚ್‌. ಚಂದ್ರಶೇಖರ್‌ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ದಂತ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಸಂಘ ಹಾಗೂ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ಮಾಡಿದರು.

ವೈದ್ಯರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ದೂರು ನೀಡಿದರೆ ವೃತ್ತಿ ಹೇಗೆ ಮುಂದುವರೆಸುತ್ತೀರಿ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಘಟನೆಯು ಕ್ಲಿನಿಕ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯಾವಳಿಗಳನ್ನು ಪೊಲೀಸ್ ಠಾಣೆಗೆ ನೀಡಲಾಗಿದೆ. ಕೂಡಲೇ ಕ್ರಮಕೈಗೊಳ್ಳಬೇಕು ಹಾಗೂ ವೈದ್ಯರ ಆಸ್ಪತ್ರೆಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಹಲ್ಲು ಕೀಳಿಸಲು ಬಂದಿದ್ದ ಸೌಮ್ಯ ಎಂಬುವವರು ಅವ್ಯಾಚ್ಯ ನಿಂದಿಸಿ ಹೋದರು. ನಂತರ ಅವರ ಪತಿ ಎನ್ನಲಾದ ಅರುಣ್‌ ಅವರೊಂದಿಗೆ 10ಕ್ಕೂ ಹೆಚ್ಚು ಮಂದಿಯನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದರು ಎಂದು ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಡಾ.ಚಂದ್ರಶೇಖರ್‌ ತಿಳಿಸಿದ್ದಾರೆ.

ಮಹಿಳಾ ದಿನಾಚರಣೆ: ಸೀತಾಪಹರಣ ನಾಟಕ
ಮಂಡ್ಯ: ಭೈರವಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ಮಹಿಳಾ ದಿನ ಅಂಗವಾಗಿ ಮಾ.8 ರಂದು ನಗರದ ಕಲಾ ಮಂದಿರದಲ್ಲಿ ಹವ್ಯಾಸಿ ಮಹಿಳಾ ಕಲಾವಿದರೇ ಅಭಿನಯಿಸಿರುವ ‘ಸೀತಾಪಹರಣ’ ನಾಟಕ ಪ್ರದರ್ಶನಗೊಳ್ಳಲಿದೆ.

ಗುರುವಾರ ಸುದ್ದಿಗಾರರಿಗೆ ವಿಷಯ ತಿಳಿಸಿದ ಸಂಘದ ಖಜಾಂಚಿ ಮಹಾಲಕ್ಷ್ಮಿ ಕೋಮಲಕುಮಾರ್‌ ಅವರು, ಮಹಿಳೆಯರೇ ಎಲ್ಲ ಪಾತ್ರಗಳಲ್ಲಿ ಅಭಿನಯಿಸಬೇಕು ಎಂದು ಸಮಾನ ಮನಸ್ಕರು ಕೂಡಿಕೊಂಡು ನಾಟಕ ಮಾಡಿದ್ದೇವೆ ಎಂದರು.

ರಂಗಶಿಲ್ಪಿ ಎಚ್‌.ಎನ್‌. ರಾಮಲಿಂಗಯ್ಯ ಅವರ ನಿರ್ದೇಶನದಲ್ಲಿ ನಾಟಕ ತಾಲೀಮು ನಡೆಸಿದ್ದೇವೆ. ಐದು ಗಂಟೆಗಳ ನಾಟಕ ಇದಾಗಿದೆ. 1.20 ಲಕ್ಷ ರೂಪಾಯಿ ಖರ್ಚಾಗಿದ್ದು, ವಿವಿಧ ಇಲಾಖೆ ಹಾಗೂ ದಾನಿಗಳ ನೆರವಿನಿಂದ ನಾಟಕ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ನಾಟಕ ಪ್ರದರ್ಶನವನ್ನು ಸಂಸದೆ ರಮ್ಯಾ ಉದ್ಘಾಟಿಸಲಿದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಬಿ. ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು ಹಾಗೂ ಮುಖಂಡರು ಆಗಮಿಸಲಿದ್ದಾರೆ ಎಂದರು.
ಸಂಘದ ಅಧ್ಯಕ್ಷೆ ಕೋಮಲ, ಉಪಾಧ್ಯಕ್ಷೆ ಭಾರತಿ ರವಿಕುಮಾರ್ ಉಪಸ್ಥಿತರಿದ್ದರು.

ಪಂಪ ಭಾರತ ನಾಟಕ ಮಾ.8 ರಂದು ಪ್ರದರ್ಶನ
ಮಂಡ್ಯ: ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಕೆ.ಎಸ್‌್. ಸಚ್ಚಿದಾನಂದ ಹಾಗೂ ಲೈಬ್ರರಿ ಶಿವರಾಂ ಅವರ ಸ್ಮರಣೆ ಅಂಗವಾಗಿ ಕೆ.ವೈ. ನಾರಾಯಣಸ್ವಾಮಿ ರಚಿಸಿರುವ ‘ಪಂಪ ಭಾರತ’ ನಾಟಕವು ಮಾ.8 ರಂದು ಸಂಜೆ 6 ಗಂಟೆಗೆ ನಗರದ ವಿವೇಕಾನಂದ ರಂಗಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಪ್ರಮೋದ್‌ ಶಿಗ್ಗಾಂವ್‌್ ನಿರ್ದೇಶಿಸಿದ್ದು, ಬೆಂಗಳೂರಿನ ಸಮುದಾಯ ತಂಡ ಅಭಿನಯಿಸಲಿದೆ. ಗಜಾನನ ಹೆಗಡೆ ಸಂಗೀತ ನೀಡಿದ್ದಾರೆ ಎಂದು ಗುರುವಾರ ಸುದ್ದಿಗಾರರಿಗೆ ಪ್ರತಿಷ್ಠಾನದ ಕಾರ್ಯದರ್ಶಿ ಎ.ಎಂ. ರವಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಪಿಇಎಸ್‌ ಅಧ್ಯಕ್ಷ ಎಚ್‌್.ಡಿ. ಚೌಡಯ್ಯ ವಹಿಸಲಿದ್ದಾರೆ ಎಂದರು. ರಾಕೇಶ್‌, ಶಿವಾನಂದ, ಮುರುಳಿಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.