ADVERTISEMENT

ಶಿಕ್ಷಕರು ದಾರಿ ತಪ್ಪದಿರಲಿ: ಮುದ್ದೇಗೌಡ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:39 IST
Last Updated 2 ಜನವರಿ 2014, 6:39 IST

ಮಂಡ್ಯ: ಶಿಕ್ಷಕರು ದಾರಿ ತಪ್ಪಿದರೆ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ. ಆದ್ದರಿಂದ ಶಿಕ್ಷಕರು ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾರ್ಯವನ್ನು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಡಾ.ಎಚ್‌.ಎಸ್‌. ಮುದ್ದೇಗೌಡ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಬುಧವಾರ ನಾಗರಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿವೃತ್ತಿಯ ನಂತರರ ಬಿಡುವಿನ ಅವಧಿಯನ್ನು ಸಮಾಜದ ಚಟು­ವಟಿಕೆಗಳಿಗೆ ಮೀಸಲಾಗಿಸಬೇಕು. ಇದರಿಂದ ವ್ಯಕ್ತಿಯ ಗೌರವ ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಮಾತನಾಡಿ, ಉತ್ತಮ ಕೆಲಸ ಮಾಡುವವರನ್ನು ಗೌರವಿಸುವು­ದರಿಂದ ಸಮಾಜದ ಪ್ರತಿಷ್ಠೆಯೂ ಹೆಚ್ಚಾಗುತ್ತದೆ. ಅವರಿಗೂ ಉತ್ತಮ ಕೆಲಸ ಮಾಡಲು ಪ್ರೇರಣೆಯಾಗುತ್ತದೆ ಎಂದರು.

ಅಭಿನಂದನಾ ಭಾಷಣ ಮಾಡಿದ ಶಿವನಂಜು ಮಾತನಾಡಿ, ಉತ್ತಮ ಸೇವೆ ಮಾಡಿರುವ ಒಬ್ಬರು ವೈದ್ಯರು ಹಾಗೂ ನಾಲ್ವರು ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಒಳ್ಳೆಯ ಕೆಲಸ. ಇಂತಹ ಕಾರ್ಯಕ್ರಮಗಳ ಮಾಡುವುದರಿಂದ ಉತ್ತಮ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಡಾ.ಎನ್‌. ರಾಮಲಿಂಗೇಗೌಡ, ಎಚ್‌. ರಾಮಚಂದ್ರ, ಎನ್‌. ಸಣ್ಣೇಗೌಡ, ಕೆ. ಶಿವರಾಮು ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಬಿ. ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ  ಚಂದ್ರಕಲಾ, ನಗರಸಭೆ ಸದಸ್ಯ ಕೆ.ಸಿ. ರವೀಂದ್ರ, ಮಾಜಿ ಸದಸ್ಯ ಕೆ.ಎಲ್‌. ನಾಗೇಂದ್ರ, ಜಿ.ಪಂ. ಮಾಜಿ ಅಧ್ಯಕ್ಷ ವಿವೇಕಾನಂದ, ಜಿ.ಸಿ. ಆನಂದ್‌, ಬೇಲೂರು ಸೋಮಶೇಖರ್‌, ಜಿಲ್ಲಾ ಯುವ ಬರಹಗಾರರ ಅಧ್ಯಕ್ಷ ಸತೀಶ್‌ ಜವರೇಗೌಡ, ಸುನಿಲ, ರಾಮಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.