ADVERTISEMENT

`ಸತತ ಶ್ರಮವೇ ಸಾಧನೆಯ ಮೂಲ'

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 6:42 IST
Last Updated 9 ಜುಲೈ 2013, 6:42 IST

ಮದ್ದೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲೂ ಅಪಾರ ಪ್ರತಿಭೆಯಿದ್ದು, ಅದನ್ನು ಸಶಕ್ತವಾಗಿ ಬಳಸಿಕೊಂಡು ಬದುಕಿನಲ್ಲಿ ಉನ್ನತವಾದುದ್ದನ್ನು ಸಾಧಿಸಬೇಕು ಎಂದು ಕೃಷಿ ವಿಜ್ಞಾನಿ ಡಾ.ಪಿ.ಬಸವರಾಜು ತಿಳಿಸಿದರು.

ತಾಲ್ಲೂಕಿನ ಬೆಕ್ಕಳಲೆ ಗ್ರಾಮದ ಗಾಂಧಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 25ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ನಾನು ಕೂಡ ಇದೇ ಹಳ್ಳಿಯ ಗಾಂಧಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದೆ. ತದನಂತರದೀ ಎಂಎಸ್ಸಿ ಪದವಿ ಪಡೆದು, ಡೆನ್ಮಾಕ್‌ನ ಕೂಪನ್ ಹೆಗನ್ ವಿಶ್ವವಿದ್ಯಾನಿಲಯದಲ್ಲಿ ಬೀಜ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದೆ. ಉನ್ನತ ಗುರಿ ಹಾಗೂ ನಿರಂತರ ಅಭ್ಯಾಸದೊಂದಿಗೆ ಸತತ ಶ್ರಮ ಹಾಕಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂಬುದಕ್ಕೆ ನಾನೇ ಸಾಕ್ಷಿ ಎಂದರು.

ಮಾಜಿ ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಷ್ಟೇ ದೊಡ್ಡ ಸಾಧನೆ ಮಾಡಿದರೂ ತಮ್ಮೂರನ್ನು ಹಾಗೂ ತಾನು ಓದಿದ ಶಾಲೆಯನ್ನು ಮರೆಯದ ಕೃಷಿ ವಿಜ್ಞಾನಿ ಡಾ.ಪಿ. ಬಸವರಾಜು ಅವರ ಕೃತಜ್ಞತಾ ಧನ್ಯತಾ ಗುಣವನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಮುಖ್ಯಶಿಕ್ಷಕ ಸಿ.ಎಸ್. ಶಿವರಾಮಯ್ಯ, ಪಿಕಾರ್ಡ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿದರು.
ಉಪನ್ಯಾಸಕರಾದ ಡಾ.ಕೃಷ್ಣಪ್ಪ, ಶಂಕರೇಗೌಡ, ಶಿಕ್ಷಕರಾದ ಸಿದ್ದಯ್ಯ, ಸತೀಶ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.