ADVERTISEMENT

ಸರ್ವರ ಏಳಿಗೆಯಿಂದ ‘ಸುವರ್ಣ ಕರ್ನಾಟಕ’

ವಿಧಾನಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:37 IST
Last Updated 3 ಜನವರಿ 2014, 9:37 IST

ಮಂಡ್ಯ: ರಾಜ್ಯದಲ್ಲಿನ ಎಲ್ಲ ಜಾತಿ, ವರ್ಗದ ಜನರು ಅಭಿವೃದ್ಧಿ ಹೊಂದಿ­ದಾಗ ಮಾತ್ರವೇ ‘ಸುವರ್ಣ ಕರ್ನಾಟಕ’ದ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಡಾ.ವೀರಣ್ಣ ಮತ್ತಿಕಟ್ಟಿ ಹೇಳಿದರು. ಕನ್ನಡಸೇನೆ ಮಂಡ್ಯ ಜಿಲ್ಲಾ ಘಟಕವು ಗುರುವಾರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ, ಕುವೆಂಪು ಜಯಂತಿ ಆಚರಣೆ ಹಾಗೂ ಕನ್ನಡ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವೇ ಜನರು ಪ್ರಗತಿ ಹೊಂದಿದರೆ ರಾಜ್ಯ ಪ್ರಗತಿ ಪಥದಲ್ಲಿ ಹೋಗಲು ಸಾಧ್ಯವಿಲ್ಲ. ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆ ದೃಷ್ಟಿಯಿಂದ ಪ್ರತಿಯೊಬ್ಬ ಕನ್ನಡಿಗರೂ ಅಭಿವೃದ್ಧಿ ಹೊಂದಬೇಕಿದೆ ಎಂದರು. ರಾಜ್ಯ ಮತ್ತು ಇಲ್ಲಿನ ಮಾತೃಭಾಷೆ ಅಭಿವೃದ್ಧಿ ದೃಷ್ಟಿಯಿಂದ, ಹೆಚ್ಚಿನ ಸಂಪನ್ಮೂಲ ತರಲು ಕೇಂದ್ರದ ಸರ್ಕಾರದ ಮೇಲೆ ಒತ್ತಡ ಹೇರಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸ­ಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಏಕೀಕರಣವಾಗಿದ್ದರೂ ಹಲವಾರು ಸ್ಥಿತ್ಯಂತರಗಳನ್ನು ಎದುರಿಸ­ಬೇಕಾದ ಸ್ಥಿತಿಯಲ್ಲಿ ಕನ್ನಡಿಗರಿದ್ದೇವೆ. ಈ ಮಧ್ಯೆ ಸ್ವಾಭಿಮಾನದ ಬದುಕು ನಡೆಸುವುದರ ಜತೆಗೆ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ನುಡಿದರು. ವಿಮರ್ಶಕಿ ಡಾ. ಪದ್ಮಾ ಶೇಖರ್‌ ಮಾತನಾಡಿ, ‘ಅಖಂಡ ಕರ್ನಾಟಕ ಕಟ್ಟಲು ಎಲ್ಲಾ ಕನ್ನಡಿಗರು ನಾಡು ಮತ್ತು ನುಡಿಯ ಬಗೆಗೆ ಬದ್ಧತೆ ತೋರಬೇಕಿದೆ’ ಎಂದು ಸಲಹೆ ನೀಡಿದರು.

ಕರ್ನಾಟಕ ಪಡಿತರ ವಿತರಕರ ಸಂಘದ ಕೆ.ಕೆ. ಕೃಷ್ಣಪ್ಪ, ಹಲಗೂರು ನಾಗರಿಕ ವೇದಿಕೆ ಅಧ್ಯಕ್ಷ ಮಂಚೇಗೌಡ, ಕರ್ನಾಟಕ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ವಾಗೀಶ್‌ ಪ್ರಸಾದ್‌, ವಕೀಲ ವಿಶಾಲ್‌ ರಘು ಸೇರಿದಂತೆ ಹಲವರಿಗೆ ‘ಸಮಾಜಸೇವಾ ರತ್ನ’ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕನ್ನಡ ಸೇನೆ ರಾಜ್ಯ ಘಟಕದ ಅಧ್ಯ್ಯಕ್ಷ ಕೆ.ಆರ್‌. ಕುಮಾರ್‌, ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್‌ ಜವರೇಗೌಡ, ಕನ್ನಡ ಸೇನೆ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಯಶೋದಾ ಕೃಷ್ಣೇಗೌಡ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.