ಶ್ರೀರಂಗಪಟ್ಟಣ: ಕಾರಿನಲ್ಲಿ ಕುಳಿತಿದ್ದಾಗ ಕತ್ತಿನಲ್ಲಿದ್ದ 60 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಓಡಿದ ಕಿಡಿಗೇಡಿಯನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಮೀಪದ ಗಂಜಾಂ ನಿಮಿಷಾಂಬಾ ದೇವಾಲಯಕ್ಕೆ ಶನಿವಾರ ಕುಟುಂಬ ಸದಸ್ಯರ ಜತೆ ಬಂದಿದ್ದ ಬೆಂಗಳೂರು ಮಹಾಲಕ್ಷ್ಮಿಪುರಂನ ಸುರೇಶ್ಕುಮಾರ್ ಅವರ ಪತ್ನಿ ನವ್ಯಾ (23) ಈ ಸಾಹಸ ಮಾಡಿದವರು.
ಪಾಂಡವಪುರ ತಾಲ್ಲೂಕು ಸಣಬ ಗ್ರಾಮದ ರಾಜು ಎಂಬವರ ಮಗ ನವೀನ್ಕುಮಾರ್ (25) ಸಿಕ್ಕಿಬಿದ್ದವ. ನವ್ಯಾ ಆರೋಪಿಯನ್ನು ಹಿಡಿದ ಕೂಡಲೇ ಸುತ್ತಲು ಇದ್ದ ಜನರು ಹಾಗೂ ವ್ಯಾಪಾರಿಗಳು ನವೀನ್ಕುಮಾರ್ನನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಎಸ್ಐ ಯೋಗಾಂಜನಪ್ಪ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದರು.
ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಎಂ.ಎ. ಪದವೀಧರನಾಗಿರುವ ಆರೋಪಿ ನವೀನ್ಕುಮಾರ್ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದಾನೆ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಈ ಕೃತ್ಯಕ್ಕೆ ಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಸಾಹಸಕ್ಕೆ ಪೊಲೀಸರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.