ADVERTISEMENT

ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 5:27 IST
Last Updated 6 ಜನವರಿ 2018, 5:27 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದಲ್ಲಿ ಒಂದೂವರೆ ವರ್ಷದ ಹಿಂದೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ಗ್ರಾಮದ ಹೃದಯ ಭಾಗದಲ್ಲಿ ಸ್ಥಾಪಿಸಿರುವ ಈ ನೀರಿನ ಘಟಕ ಸದ್ಯ ನಿಷ್ಪ್ರಯೋಜಕವಾಗಿದೆ. ಎರಡೂವರೆ ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಇದ್ದ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಇಷ್ಟು ದಿನಗಳಾದರೂ ಯಾರೂ ಇತ್ತ ಗಮನ ಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

‘ಗ್ರಾಮೀಣ ಕುಡಿಯುವ ನೀರು ವಿಭಾಗ ಮತ್ತು ಗ್ರಾಮ ಪಂಚಾಯಿತಿಗಳು ಆಸಕ್ತಿ ವಹಿಸೇ ನಿರ್ಲಕ್ಷ್ಯ ವಹಿಸಿವೆ. ಸರ್ಕಾರದ ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ. ಗ್ರಾಮದ ಜನರು ನಲ್ಲಿಗಳಲ್ಲಿ ಬರುವ ಕಚ್ಚಾ ನೀರನ್ನೇ ಕುಡಿಯುತ್ತಿದ್ದೇವೆ’ ಎಂದು ಹೋಟೆಲ್‌ ರಮೇಶ್‌ ಹೇಳಿದರು.

‘ಚಿಕ್ಕಂಕನಹಳ್ಳಿ ಗ್ರಾಮದಲ್ಲಿ ಎರಡು ದಿನಗಳಿಗೆ ಒಮ್ಮೆ ನಲ್ಲಿಗಳಲ್ಲಿ ನೀರು ಬರುತ್ತಿದೆ. ಇನ್ನೇನು ಬೇಸಿಗೆ ಆರಂಭವಾಗುತ್ತಿದ್ದು, ಪರ್ಯಾಯ ನೀರಿನ ಮೂಲವನ್ನು ಕಂಡುಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಿಕೊಟ್ಟರೆ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿಯಲಿದೆ’ ಎಂಬುದು ಗ್ರಾಮದ ವಾಟರ್‌ಮನ್‌ ಮಹದೇವು ಅವರ ಮಾತು.

ADVERTISEMENT

‘ಚಿಕ್ಕಅಂಕನಹಳ್ಳಿ ಶುದ್ಧ ಕುಡಿಯುವ ನೀರಿನ ಘಟಕ(ಆರ್‌ಒ)ವನ್ನು ಹೈದರಾಬಾದ್‌ ಮೂಲದ ಸ್ಮಾರ್ಟ್‌ ಅಕ್ವಾ ಸಂಸ್ಥೆ ಗುತ್ತಿಗೆ ಪಡೆದು ನಿರ್ವಹಿಸುತ್ತಿತ್ತು. ಇದು ಸ್ಥಗಿತಗೊಂಡು ಏಳೆಂಟು ತಿಂಗಳಾದರೂ ಆ ಸಂಸ್ಥೆಯವರು ಇತ್ತ ತಲೆ ಹಾಕಿಲ್ಲ. ಪೊಲೀಸ್‌ ಠಾಣೆಗೆ ದೂರು ನೀಡಿ ಮಹಜರು ನಡೆಸಿ ಘಟಕವನ್ನು ದುರಸ್ತಿ ಮಾಡಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದೇನೆ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜು ತಿಳಿಸಿದ್ದಾರೆ.

‘ಒಂದು ವಾರದಲ್ಲಿ ಘಟಕವನ್ನು ನಮ್ಮ ಸುಪರ್ದಿಗೆ ಪಡೆದು ದುರಸ್ತಿ ಮಾಡಿಸಿ ಜನರಿಗೆ ಶುದ್ಧ ನೀರು ಕೊಡಲು ಕ್ರಮ ವಹಿಸಲಾಗುವುದು’ ಎಂದು ಪಿಡಿಒ ರಮೇಶ್‌ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.