ಪಾಂಡವಪುರ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿ ತಲುಪಿದ ನಂತರ ಪಕ್ಷವನ್ನು ಮತ್ತೆ ಕಟ್ಟಲು ಯಾವ ನಾಯಕರೂ ಮುಂದಾಗದಿರುವುದು ವಿಷಾದನೀಯ ಎಂದು ಮುಖಂಡ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸುವ ಮನಸ್ಸು ನಾಯಕರಿಗೆ ಇದ್ದಿದ್ದರೆ ಕಳೆದ ನಾಲ್ಕುವರೆ ವರ್ಷಗಳಲ್ಲಿ ಪಕ್ಷವನ್ನು ಬಲಯುತವಾಗಿ ಕಟ್ಟಬಹುದಿತ್ತು ಎಂದರು.
ಮುಖಂಡ ಚಿಕ್ಕಾಡೆ ಮಹೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಂಡವಪುರಕ್ಕೆ ಬಂದಾಗ ಸಮಾರಂಭಗಳಲ್ಲಿ ಶಾಸಕ ಪುಟ್ಟಣ್ಣಯ್ಯ ಮತ್ತು ಸಂಸದ ಪುಟ್ಟರಾಜು ಅವರನ್ನು ಹೊಗಳುತ್ತಾರೆ. ಅದರಲ್ಲೂ ಸಚಿವ ರಮೇಶ್ ಕುಮಾರ್ ಅವರಂತು ಶಾಸಕ ಪುಟ್ಟಣ್ಣಯ್ಯ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕರೆ ನೀಡುತ್ತಾರೆ. ಪಕ್ಷದ ಮೇಲ್ಮಟ್ಟದ ನಾಯಕರೇ ಈ ರೀತಿ ಕರೆ
ನೀಡಿದರೆ ಇಲ್ಲಿ ಕಾಂಗ್ರೆಸ್ ಬೆಳೆಯಲು ಹೇಗೆ ಸಾಧ್ಯ ಎಂದು ಆಕ್ರೋಶವ್ಯಕ್ತಪಡಿಸಿದರು.
ಮುಖಂಡ ಕೋ.ಪು.ಗುಣಶೇಖರ್, ಹೈಕಮಾಂಡ್ ಪಕ್ಷದ ಟಿಕೆಟ್ ಯಾರಿಗಾದರೂ ನೀಡಲಿ, ನಾವು ಮಾತ್ರ ಹಳೆಯದನ್ನೆಲ್ಲಾ ಮರೆತು ಕೆಪಿಸಿಸಿ ಸದಸ್ಯ ಎಲ್.ಡಿ.ರವಿ ನೇತೃತ್ವದಲ್ಲಿ ಮತ್ತೆ ಪಕ್ಷವನ್ನು ಸಂಘಟಿಸಿ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ನಡೆಸುವುದರ ಮೂಲಕ ಮತ್ತೆ ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಕೆಪಿಸಿಸಿ ಸದಸ್ಯ ಎಲ್.ಡಿ.ರವಿ, ಪಿಎಸ್ಎಸ್ಕೆ ಅಧ್ಯಕ್ಷ ಹಾರೋಹಳ್ಳಿ ನಂಜುಂಡೇಗೌಡ, ಮುಖಂಡರಾದ ಕೆ.ವಿ.ಬಸವರಾಜು, ಹಿರೇಮರಳಿ ರಾಮಕೃಷ್ಣ, ಎಚ್.ಕೃಷ್ಣೇಗೌಡ (ಕಿಟ್ಟಿ), ಕೋಮಲ ಚನ್ನಪ್ಪ, ಡಿ.ಕೆ.ದೇವೇಗೌಡ, ನಜೀರ್ಅಹಮದ್, ಸಿ.ಆರ್.ರಮೇಶ್, ಸಿದ್ದಲಿಂಗಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.