ನಾಗಮಂಗಲ: ತಾಲ್ಲೂಕಿನ ಬಿದರಿಕೆರೆ ಗ್ರಾಮದಲ್ಲಿ ಮೂರು ಗ್ರಾ.ಪಂ ಸದಸ್ಯ ಸ್ಥಾನಗಳನ್ನು ಹರಾಜು ಹಾಕಿ ಸುದ್ದಿಯಾದ ಬೆನ್ನಲ್ಲೇ ಅಂಚೆಚಿಟ್ಟನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಭೈರನಹಳ್ಳಿ ಗ್ರಾಮದಲ್ಲೂ ಸದಸ್ಯ ಸ್ಥಾನದ ಹರಾಜು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.
ಕಸಬಾ ಹೋಬಳಿಯ ಭೈರನಹಳ್ಳಿ ಗ್ರಾಮದಲ್ಲಿ ಗ್ರಾ.ಪಂ ಸ್ಥಾನಗಳನ್ನು ಬಹಿರಂಗವಾಗಿ ಹರಾಜು ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಗಮನಿಸಿದ ತಹಶೀಲ್ದಾರ್ ಕುಂಞಿ ಅಹಮದ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಕುಮಾರ್, ಬೆಳ್ಳೂರು ಠಾಣೆಯ ಸಬ್ ಇನ್ಸ್ಪೆಕ್ಟರ್ ದಯಾನಂದ್ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಸ್ಥರು ಸೇರಿದಂತೆ ಮುಖಂಡರನ್ನು ಕರೆದು ಬಿದರಿಕೆರೆ ಗ್ರಾಮದಲ್ಲಿ ಬಹಿರಂಗ ಹರಾಜಿನಲ್ಲಿ ಭಾಗಿಯಾದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಈ ಗ್ರಾಮದಲ್ಲೂ ಹರಾಜು ಮಾಡಿರುವ ವಿಚಾರ ತಿಳಿದಿದೆ. ಇಂತಹ ಬೆಳವಣಿಗೆ ಕಾನೂನು ಬಾಹಿರವಾದುದು ಎಂದು ತಿಳಿಸಿದರು.
‘ಬಹಿರಂಗ ಹರಾಜು ಚಟುವಟಿಕೆ ತಡೆಯಲು ಗ್ರಾಮಗಳಲ್ಲಿ ರಾತ್ರಿಯ ಗಸ್ತಿಗೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಲ್ಲದೇ ಗ್ರಾಮ ಪಂಚಾಯಿತಿ ನೌಕರರನ್ನು ಸಹ ನೇಮಿಸಿದ್ದು, ಗ್ರಾಮಗಳಲ್ಲಿ ನಡೆಯುವ ಚಟುವಟಿಕೆ ಮೇಲೆ ನಿಗಾ ವಹಿಸಲಾಗಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.