ಮಳವಳ್ಳಿ: ‘ತಾಲ್ಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಗ್ರಾಮದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಐತಿಹಾಸಿಕ ಪವಾಡ ಪುರುಷ ಮಂಟೇಸ್ವಾಮಿ ಜಾತ್ರಾ ಮಹೋತ್ಸವವನ್ನು ಜಿಲ್ಲಾಡಳಿತದ ಆದೇಶದಂತೆ ರದ್ದುಪಡಿಸಲಾಗಿದೆ’ ಎಂದು ಮಂಟೇಸ್ವಾಮಿ ಮಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸ್ ತಿಳಿಸಿದರು.
‘ಪ್ರತಿ ವರ್ಷ ಯುಗಾದಿ ಹಬ್ಬದ ಹಿಂದಿನ ದಿನ ಕಪ್ಪಡಿ ಜಾತ್ರೆ ಮುಗಿಸಿ ಬರುವ ಮಠಾಧಿಪತಿಗಳು ಬಿಜಿಪುರ ಮಠವನ್ನು ಪ್ರವೇಶಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವ ಪದ್ಧತಿ ಇತ್ತು. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರು. ಆದರೆ, ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತದ ಆದೇಶದಂತೆ ಜಾತ್ರೆ ರದ್ದುಪಡಿಸಲಾಗಿದೆ’ ಎಂದರು.
‘ಎ.11 ರಂದು ಎದಿರು ಸೇವೆ, ಏ.14ರಿಂದ 26ರವರೆಗೆ ನಡೆಯಬೇಕಿದ್ದ ವಿವಿಧ ಪಂಕ್ತಿ ಸೇವೆಗಳ ಉತ್ಸವಗಳನ್ನು ಸಹ ರದ್ದುಪಡಿಸಿದ್ದು, ಮಂಟೇಸ್ವಾಮಿಯ ಭಕ್ತರು ಮನೆಯಲ್ಲೇ ಸ್ವಾಮಿಗೆ ಧೂಪದ ಆರತಿ ಬೆಳಗುವ ಮೂಲಕ ಹಬ್ಬವನ್ನು ಆಚರಣೆ ಮಾಡಬೇಕು’ ಎಂದು ಜ್ಞಾನಾನಂದ ಚೆನ್ನರಾಜೇ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.