ನಾಗಮಂಗಲ: ‘ನಮ್ಮ ಪಕ್ಷದಲ್ಲಿ ಹಿರಿಯರು, ಅನುಭವಿಗಳು, ಮಾಜಿ ಸಚಿವರು ಮತ್ತು ಹಲವು ಬಾರಿ ಗೆದ್ದವರು ಇರುವುದರಿಂದ ಎಲ್ಲರನ್ನೂ ಮಂತ್ರಿಗಳನ್ನಾಗಿ ಮಾಡಲು ಅವಕಾಶವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸಂಪುಟದಲ್ಲಿ ಕೆಲವು ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಆದ್ದರಿಂದ ಸ್ವಾಭಾವಿಕವಾಗಿ ಕೆಲವರು ತಮ್ಮ ಭಾವನೆಗಳನ್ನು ಹೊರಹಾಕಿದ್ದಾರೆ. ಕೆಲವು ಶಾಸಕರಲ್ಲಿ ಭಿನ್ನಮತವೂ ಇದೆ. ಒಂದು ಕಾಲದಲ್ಲಿ 85 ಸಚಿವರಿದ್ದರು. ಈಗ 33 ಜನರಿಗೆ ಮಾತ್ರ ಮಂತ್ರಿ ಸ್ಥಾನ ನೀಡಲು ಅವಕಾಶವಿದೆ’ ಎಂದರು..
‘ರಾಜ್ಯದ ಜನರ ಹಿತವನ್ನು ಗಮನದಲ್ಲಿರಿಸಿ ಕೊಂಡು ಪಕ್ಷದ ಸೈದ್ಧಾಂತಿಕ ವಿಚಾರಕ್ಕೆ ಪೂರಕವಾಗಿ ಮಂತ್ರಿಮಂಡಲ ಅಭಿವೃದ್ಧಿ ಕೆಲಸ ಮಾಡಿದಾಗ ಜನರು ತೃಪ್ತರಾಗುತ್ತಾರೆ. ರಾಜ್ಯದ ಜನ ನಮ್ಮ ಸಚಿವ ಸಂಪುಟದ ಕಾರ್ಯಗಳನ್ನು ತೃಪ್ತಿ ಪಟ್ಟುಕೊಂಡರೆ ಭಿನ್ನಮತ ಉಂಟಾಗುವುದಿಲ್ಲ’ ಎಂದರು.
‘ವ್ಯಕ್ತಿಗತ ಕಾರಣಕ್ಕೆ ಭಿನ್ನಮತ ಉಂಟಾದರೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯದ ಜನತೆಯ ಹಿತವನ್ನು ಆದ್ಯತೆಯಾಗಿ ಇಟ್ಟುಕೊಂಡು ಮಂತ್ರಿಯಾದವರು ಇದೊಂದು ಸೇವೆ ಎಂದು ಭಾವಿಸಿ ಉತ್ತಮವಾಗಿ ಕೆಲಸ ಮಾಡಿದರೆ ಜನ ಒಪ್ಪಿಕೊಳ್ಳುತ್ತಾರೆ. ಆದ್ದರಿಂದ ಶಾಸಕರು ಎಚ್ಚರವಹಿಸುವ ಅವಶ್ಯಕತೆಯಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.