ಅಪಘಾತ
–ಪ್ರಾತಿನಿಧಿಕ ಚಿತ್ರ
ಮದ್ದೂರು: ತಾಲ್ಲೂಕಿನ ಅಗರಲಿಂಗನದೊಡ್ಡಿ ಬಳಿಯ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ ಮಕ್ಸೂದ್ (21), ಅಯಾನ್ (25) ಮೃತ ಯುವಕರು. ಮುಜಾಯಿದ್ ಪಾಷ, ಬಸವರಾಜು, ಪಾರ್ವತಿ, ನಾಗರತ್ನ ಹಾಗೂ ನಾಗರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರಿಗೆ ಚನ್ನಪಟ್ಟಣ ಬಳಿಯ ಖಾಸಗಿ ಆಸ್ಪತ್ರೆ ಮತ್ತು ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಬೆಂಗಳೂರಿಗೆ ರವಾನಿಸಲಾಗಿದೆ.
ಮಕ್ಸೂದ್, ಅಯಾನ್ ಹಾಗೂ ಮುಜಾಯಿದ್ ಪಾಷ ಬೆಂಗಳೂರಿನಿಂದ ಮೈಸೂರಿಗೆ ಸ್ಕೋಡಾ ಕಾರಿನಲ್ಲಿ ಹೋಗುತ್ತಿದ್ದರು, ಅತೀ ವೇಗದ ಚಾಲನೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರು ಮೂಲದ ಪಾರ್ವತಿ, ಬಸವರಾಜು, ನಾಗರತ್ನ ಹಾಗೂ ನಾಗರಾಜು ಅವರಿಗೆ ತೀವ್ರವಾಗಿ ಗಾಯವಾಗಿದೆ.
ಅಪಘಾತದಿಂದ ಹೆದ್ದಾರಿಯಲ್ಲಿ 4 ಕಿಲೋ ಮೀಟರ್ವರೆಗೂ ಸಂಚಾರ ದಟ್ಟಣೆಯಗಿತ್ತು. ಪಟ್ಟಣದ ಸಂಚಾರ ಪೊಲೀಸರು ವಾಹನ ತೆರವು ಕಾರ್ಯಾಚರಣೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಟ್ಟಣದ ಸಂಚಾರ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.