ಮಂಡ್ಯ: ‘ಜೈ ಮಹಾರಾಷ್ಟ್ರ, ಜೈ ಶಿವಾಜಿ’ ಹೇಳಿಕೆ ನೀಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಪೌರಾಡಳಿತ ಮತ್ತು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಕ್ಷಮೆ ಯಾಚನೆ ಮಾಡಿದ್ದಾರೆ.
ಫೆ.19ರಂದು ಕೆ.ಆರ್.ಪೇಟೆಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಕಲಾವಿದರು ಸಚಿವ ನಾರಾಯಣಗೌಡರಿಗೆ ಸನ್ಮಾನ ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ನನ್ನ ಬದುಕು ಕಟ್ಟಿಕೊಳ್ಳಲು, ಈ ಮಟ್ಟಕ್ಕೆ ಬೆಳೆಯಲು ಮಹಾರಾಷ್ಟ್ರ ಕಾರಣವಾಯಿತು. ಜೈ ಮಹಾರಾಷ್ಟ್ರ, ಜೈ ಶಿವಾಜಿ’ ಎಂದು ಘೋಷಣೆ ಕೂಗಿದ್ದರು.
ಸಚಿವರ ಹೇಳಿಕೆ ನಂತರ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು. ಪರಿಸ್ಥಿತಿಯನ್ನು ಅರಿತ ಸಚಿವರು ತಮ್ಮ ಹೇಳಿಕೆಗೆ ಕ್ಷಮೆ ಯಾಚನೆ ಮಾಡಿದ್ದಾರೆ.
‘ಮಹಾರಾಷ್ಟ್ರದ ಕಲಾವಿದರು ನನಗೆ ಸನ್ಮಾನ ಮಾಡಿದಾಗ ನನ್ನ ಹಿಂದಿನ ನೆನಪು ನೆನಪಾಯಿತು. ಆ ಸಂದರ್ಭದಲ್ಲಿ ಭಾವುಕನಾಗಿ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದಿದ್ದೆ. ಕನ್ನಡ ನಾಡಿಗೆ ಅವಮಾನ ಮಾಡುವ ಯಾವುದೇ ಉದ್ದೇಶ ನನಗೆ ಇರಲಿಲ್ಲ. ನನ್ನ ಮಾತು ತಪ್ಪಾಗಿದ್ದರೆ ಕ್ಷಮೆ ಕೋರುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.