ADVERTISEMENT

ಮಹಿಳೆಯರಿಗೆ ಪೂರಕ ವಾತಾವರಣ ಸೃಷ್ಟಿಸಲಿ

ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 3:23 IST
Last Updated 13 ಮಾರ್ಚ್ 2022, 3:23 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯರು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳೆಯರು   

ನಾಗಮಂಗಲ: ‘ಸಮಾಜವು ಮಹಿಳೆಯರಿಗೆ ಗೌರವ ನೀಡಬೇಕು. ಹೆಣ್ಣು ಸ್ವತಂತ್ರ ಹಾಗೂ ನೆಮ್ಮದಿ ಗಾಗಿ ಬದುಕಲು ಬೇಕಾದ ವಾತಾವರಣ ಕಲ್ಪಿಸಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ನಾಥ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಮಹಿಳೆಯರನ್ನು ಪೂಜಿಸುವ ಮನೆಗಳು ಅಭಿವೃದ್ಧಿಯೆಡೆಗೆ ಸಾಗುತ್ತವೆ. ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಜಗತ್ತಿನಲ್ಲಿ ಜನ್ಮದಾತೆಗಿಂತ ಬೇರೆ ದೇವರಿಲ್ಲ. ನಮ್ಮನ್ನು ಈ ಭೂಮಿಗೆ ತಂದು ಹೊತ್ತು ಸಾಕಿ ಸಲುಹಿದ ತಾಯಿಯನ್ನು ಪ್ರೀತಿ, ಗೌರವದಿಂದ ಕಾಣಬೇಕು’ ಎಂದರು.

ADVERTISEMENT

‘ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ತಾಯಿಗಿದೆ. ಅನೇಕ ಸಮಸ್ಯೆಗಳ ನಡುವೆಯೂ ಹೆಣ್ಣು ಉತ್ತಮ ಸಾಧನೆ ಮಾಡುತ್ತಿದ್ದಾಳೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವೃಕ್ಷ ಮಾತೆ ತುಳಸೀಗೌಡ ಮಾತನಾಡಿ, ‘ಸುತ್ತಮುತ್ತಲಿನ ಪರಿಸರವನ್ನು ಉಳಿಸಬೇಕು. ಆಗ ಮಾತ್ರ ಇಡೀ ಮನುಕುಲ ನೆಮ್ಮದಿಯಿಂದ ಬದುಕಲು ಸಾಧ್ಯ. ಗಿಡಮರಗಳು ಯಾವುದೇ ಸ್ವಾರ್ಥವಿಲ್ಲದೆ ಗಾಳಿ, ನೆರಳು, ಹಣ್ಣು ನೀಡುತ್ತವೆ. ಆದ್ದರಿಂದ ಎಲ್ಲರೂ ಕಾಡನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ವಿಶ್ವ ಒಕ್ಕಲಿಗರ ಮಹಾವೇದಿಕೆ ಅಧ್ಯಕ್ಷೆ ಭಾರತಿ ಮಾತನಾಡಿ, ‘ಆದಿಚುಂಚನಗಿರಿ ನಮಗೆಲ್ಲ ತವರು ಮನೆಯಂತೆ. ಕ್ಷೇತ್ರಕ್ಕೆ ಬಂದರೆ ತವರಿಗೆ ಬಂದಷ್ಟು ಸಂತಸವಾಗುತ್ತದೆ’ ಎಂದರು.

ಮೈಸೂರಿನ ಯೋಗ ಪಟು ಖುಷಿ ಹೇಮಚಂದ್ರ ಯೋಗ ಪ್ರದರ್ಶನ ನೀಡಿದರು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ವಿಧಾನ ಪರಿಷತ್‍ ಕಾರ್ಯದರ್ಶಿ ಮಹಾಲಕ್ಷ್ಮಿ, ಬೆಂಗಳೂರು ಶಾರದ ಒಕ್ಕಲಿಗರ ಸಂಘದ ಮಹಾದೇವಮ್ಮ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಇದ್ದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೇಶಿ ಗೋವಿಂದೇಗೌಡ, ಖುಷಿ ದಿನೇಶ್, ಎಂ.ಕೆ.ಆಶಾ, ಡಾ.ಹಿಂದುಮತಿ, ಪದ್ಮಿನಿ, ಖುಷಿ ಹೇಮಚಂದ್ರ, ಶೋಭಾ, ಟಿ.ವಿ.ವೆಂಕಟಲಕ್ಷ್ಮಿ, ಜಿ. ಬಿಂದುರಾಣಿ, ರಿತನ್ಯಗೌಡ ಅವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು. ಮಹಿಳೆಯರಿಗೆ ಬಾಗಿನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.