ADVERTISEMENT

ಅನಧಿಕೃತ ವಾಸ: 200 ಆಶ್ರಯ ಮನೆಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 6:05 IST
Last Updated 25 ಫೆಬ್ರುವರಿ 2011, 6:05 IST

ಮೈಸೂರು: ನಗರದ ರಮಾಬಾಯಿನಗರದಲ್ಲಿ ಅನಧಿಕೃತವಾಗಿ ವಾಸ ಮಾಡುತ್ತಿದ್ದವರನ್ನು ಗುರುವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ಮಾಡಿ ಖಾಲಿ ಮಾಡಿಸಿ, 200 ಆಶ್ರಯ ಮನೆಗಳನ್ನು ವಶಕ್ಕೆ ಪಡೆಯಲಾಯಿತು. ಸುಮಾರು 104 ಮಂದಿ ನಿರಾಶ್ರಿತರಿಗೆ ಆಶ್ರಯ ಮನೆಗಳನ್ನು ನೀಡಲಾಗಿತ್ತು. ಆದರೆ ಕೆಲ ನಿರಾಶ್ರಿತರು ತಾವು ವಾಸಿಸುವ ಬದಲು ಅನ್ಯರಿಗೆ ಬಾಡಿಗೆ ನೀಡಿದ್ದರು. ಮತ್ತೆ ಕೆಲವರು ಮನೆಗಳನ್ನು ಮಾರಾಟ ಮಾಡಿದ್ದರು.

ಇದನ್ನು ಅರಿತ ಜಿಲ್ಲಾಧಿಕಾರಿ ಹರ್ಷಗುಪ್ತ ಸ್ಥಳಕ್ಕೆ ತೆರಳಿ ಅನಧಿಕೃತವಾಗಿ ವಾಸ ಮಾಡುತ್ತಿದ್ದವರನ್ನು ಸಾಮಾನು ಸರಂಜಾಮುಗಳೊಂದಿಗೆ ಖಾಲಿ ಮಾಡುವಂತೆ ಆದೇಶ ನೀಡಿದರು. ಬಳಿಕ ಅನಧಿಕೃತವಾಗಿ ವಾಸ ಮಾಡುತ್ತಿದ್ದವರು ಮನೆ ಸಾಮಾನುಗಳೊಂದಿಗೆ ಮನೆ ಖಾಲಿ ಮಾಡಿದರು.

ವರ್ತುಲ ರಸ್ತೆಯ ಬಳಿ ಸುಮಾರು 4.5 ಎಕರೆ ಪ್ರದೇಶದಲ್ಲಿ 104 ನಿರಾಶ್ರಿತ ಕುಟುಂಬಗಳು ಟೆಂಟ್‌ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದರು. ಇವರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಜಾಗದ ಅವಶ್ಯಕತೆ ಇರುವುದರಿಂದ ಅಂದಾಜು ರೂ.7-8 ಕೋಟಿ ವೆಚ್ಚದಲ್ಲಿ ಭೂಮಿ ಖರೀದಿಸಿ ನಿರಾಶ್ರಿತರಿಗೆ ಸೂರು ಕಲ್ಪಿಸಿಕೊಡಲು ಜಿಲ್ಲಾಧಿಕಾರಿ ಚಿಂತನೆ ನಡೆಸಿದ್ದರು.

ಈ ನಡುವೆ ರಮಾಬಾಯಿನಗರದಲ್ಲಿ ನೀಡಲಾಗಿದ್ದ ಆಶ್ರಯ ಮನೆಗಳಲ್ಲಿ ಅರ್ಹ ಫಲಾನುಭವಿಗಳು ವಾಸ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಅವರಿಗೆ ತಿಳಿಸಿದ್ದರು. ನಂತರ ಆಶ್ರಯ ಮನೆಗೆ ತೆರಳಿದ ಅಧಿಕಾರಿಗಳ ತಂಡ ಪರಿಶೀಲಿಸಿದಾಗ ಶೇ.70 ಮಂದಿ ಅನಧಿಕೃತವಾಗಿ ವಾಸ ಮಾಡುತ್ತಿರುವುದು ಬೆಳಕಿಗೆ ಬಂತು. ಬಳಿಕ ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ ಅನಧಿಕೃತವಾಗಿ ವಾಸ ಮಾಡುತ್ತಿದ್ದ ಆಶ್ರಯ ನಿವಾಸಿಗಳನ್ನು ಮನೆಯಿಂದ ಹೊರಹಾಕಲಾಯಿತು.

‘ಆಶ್ರಯ ಮನೆಗಳಲ್ಲಿ ಅನಧಿಕೃತವಾಗಿ ವಾಸ ಮಾಡುತ್ತಿರುವವರನ್ನು ಖಾಲಿ ಮಾಡಿಸಿ ಮನೆಗಳನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಪಾಲಿಕೆ ವತಿಯಿಂದ ಸ್ವಚ್ಛ ಮಾಡಲಾಗಿದೆ. ಆಶ್ರಯ ಮನೆಗಳಲ್ಲಿ ಅರ್ಹರಲ್ಲದ ಫಲಾನುಭವಿಗಳು ವಾಸ ಮಾಡಿದಲ್ಲಿ ಅವರನ್ನು ಸ್ಥಳದಲ್ಲೇ ಖಾಲಿ ಮಾಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ತಿಳಿಸಿದರು. ಕಾರ್ಯಾಚರಣೆಯಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.