ADVERTISEMENT

ಆಹಾರ ಭದ್ರತೆ: ಪ್ರಚಾರಾಂದೋಲನ ಆರಂಭ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 6:10 IST
Last Updated 20 ಜುಲೈ 2012, 6:10 IST

ಮೈಸೂರು: ಆಹಾರ ಭದ್ರತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಗುರುವಾರದಿಂದ ಪ್ರಚಾರಾಂದೋಲನ ಆರಂಭಿಸಿದವು.

ರಂಗಕರ್ಮಿ ಜನಾರ್ದನ್ (ಜನ್ನಿ) ಪ್ರಚಾರಾಂದೋ ಲನಕ್ಕೆ ಚಾಲನೆ ನೀಡಿ ಮಾತನಾಡಿ `ಜಗತ್ತಿನಲ್ಲಿಯೇ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಜನ ನರಳುತ್ತಿರುವ ದೇಶ ಭಾರತ. ಹತ್ತರಲ್ಲಿ ಆರು ಮಂದಿ ರಕ್ತಹೀನತೆ ಯಿಂದ ಬಳಲುತ್ತಿದ್ದಾರೆ. 770 ಟನ್‌ಗಳಷ್ಟು ಗೋದಿ ಮತ್ತು ಅಕ್ಕಿ ಸರ್ಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿವೆ. ಪಡಿತರ ವ್ಯವಸ್ಥೆಯ ಪ್ರಕಾರ ಇಡೀ ವರ್ಷ 5 ಕೋಟಿ ಟನ್ ಆಹಾರ ಧಾನ್ಯ ಮಾತ್ರ ಸಾಕು.

ಈಗಿರುವ ಪಡಿತರದಲ್ಲಿಯೇ ಹೆಚ್ಚು ಜನರಿಗೆ ಆಹಾರ ಒದಗಿಸಲು ಸಾಧ್ಯವಿದೆ~ ಎಂದು ತಿಳಿಸಿದರು.
`ಆಹಾರ ಭದ್ರತೆಗೆ ಸಂಬಂಧಿಸಿದಂತೆ ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಜಾಗೃತಿ ಆಂದೋಲನ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಕ್ಕಳಲ್ಲಿ ಅಪೌಷ್ಟಿಕತೆ ಬಗ್ಗೆ ಗಮನ ಹರಿಸಬೇಕು~ ಎಂದು ಹೇಳಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಮಾತನಾಡಿ, `ಎಪಿಎಲ್, ಬಿಪಿಎಲ್ ಎಂಬ ಎರಡು ನಿಯಮಗಳನ್ನು ಸರ್ಕಾರ ಜಾರಿ ತಂದು ಜನರನ್ನು ಇಬ್ಭಾಗ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ರೂ.26 ಕ್ಕಿಂತ ಹೆಚ್ಚು ಸಂಪಾದನೆ ಮಾಡುವವರು ಮತ್ತು ನಗರ ಪ್ರದೇಶದಲ್ಲಿ ರೂ.32 ಸಂಪಾದಿಸುವವರು ಬಡವರಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಯಾರು ಬಡವರು ಮತ್ತು ಶ್ರೀಮಂತರು ಎಂಬುದನ್ನು ತಿಳಿಯಲು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಾನದಂಡ ಸರಿಯಲ್ಲ~ ಎಂದು ಟೀಕಿಸಿದರು.

`ದೇಶದಲ್ಲಿ ಅಸಂಘಟಿತ ಕಾರ್ಮಿಕ ವರ್ಗ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ನೇಮಿಸಿದ ಆಯೋಗದ ಪ್ರಕಾರ ದೇಶದಲ್ಲಿ ಶೇ 77 ರಷ್ಟು ಜನರು ದಿನಕ್ಕೆ ರೂ.20 ಕ್ಕಿಂತಲೂ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಪಿಎಲ್, ಬಿಪಿಎಲ್ ಎಂದು ವಿಂಗಡಿಸುವುದಾಗಲಿ, ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸದೆ ನಿರ್ದಿಷ್ಟ ಜನರಿಗೆ ಎಂದು ನಿಗದಿಗೊಳಿಸುವುದು ಸಲ್ಲದು. ಇದು ಸರ್ಕಾರದ ಜನ ವಿರೋಧಿ ನೀತಿ~ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಸಿಪಿಐ(ಎಂ) ಕಾರ್ಯದರ್ಶಿ ಕೆ.ಬಸವರಾಜು, ಜಿಲ್ಲಾ ಸಮಿತಿ ಸದಸ್ಯ ವಿಜಯಕುಮಾರ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಜು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.