ADVERTISEMENT

ಕಬ್ಬು ಬೆಳೆಗಾರರ ಗೋಳು ಕೇಳೋರಾರು!

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2012, 6:05 IST
Last Updated 30 ಏಪ್ರಿಲ್ 2012, 6:05 IST
ಕಬ್ಬು ಬೆಳೆಗಾರರ ಗೋಳು ಕೇಳೋರಾರು!
ಕಬ್ಬು ಬೆಳೆಗಾರರ ಗೋಳು ಕೇಳೋರಾರು!   

ಮೈಸೂರು: ಒಂದು ಟನ್ ಕಬ್ಬಿನಿಂದ ರೈತರಿಗೆ ದೊರಕುತ್ತಿರುವ ಹಣ 1800 ರಿಂದ 2000 ರೂಪಾಯಿ. ಕಬ್ಬು ಹಾಗೂ ಕಬ್ಬಿನ ಉಪ ಉತ್ಪನ್ನಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ದೊರಕುತ್ತಿರುವ ಆದಾಯ ಸರಾಸರಿ 4200 ರೂಪಾಯಿ!

ಒಟ್ಟು ಆದಾಯದಲ್ಲಿ ಶೇ 50ರಷ್ಟು ಹಣವನ್ನು ರೈತರಿಗೆ ನೀಡಿ ಇನ್ನರ್ಧ ಆದಾಯ ವನ್ನು ಕಾರ್ಖಾನೆ ಮಾಲೀಕರು ಹಾಗೂ ಆಡಳಿತ ಮಂಡಳಿಯವರು ಪಡೆಯುತ್ತಿದ್ದಾರೆ. ಬಂಡವಾಳ, ಬಡ್ಡಿ, ಟನ್ ಕಬ್ಬಿಗೆ ಸರ್ಕಾರಕ್ಕೆ ಪಾವತಿಸುವ ರೂ. 450 ಪರಿವರ್ತನಾ ಶುಲ್ಕ ಹಾಗೂ ಇತರೆ ಖರ್ಚು ಸೇರಿದಂತೆ 1 ಸಾವಿರ  ರೂಪಾಯಿ ವೆಚ್ಚ ತಗುಲುತ್ತದೆ. ಆದಾಗ್ಯೂ, ಟನ್ ಕಬ್ಬಿನಿಂದ ಕಾರ್ಖಾನೆಗಳಿಗೆ ದೊರಕುವ ಲಾಭ 1 ಸಾವಿರ ರೂಪಾಯಿ. ಆದ್ದರಿಂದ ಟನ್ ಕಬ್ಬಿಗೆ ಈಗ  ಪಾವತಿಸುತ್ತಿರುವ 2 ಸಾವಿರ ರೂಪಾಯಿಗೆ 500 ರೂಪಾಯಿ ಸೇರಿಸಿ 2500 ರೂಪಾಯಿ ಪಾವತಿಸಬೇಕು ಎಂಬುದು ರೈತರ ಲೆಕ್ಕಾಚಾರ.

ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿರುವ 9 ಸಕ್ಕರೆ ಕಾರ್ಖಾನೆಗಳ ಪೈಕಿ ಬನ್ನಾರಿ ಅಮ್ಮನ್ ಷುಗರ್ಸ್‌, ದಿ ಮೈಸೂರು ಷುಗರ್ ಕಂಪೆನಿ ಲಿಮಿಟೆಡ್ (ಮೈಷುಗರ್), ಶ್ರೀ ಚಾಮುಂಡೇ ಶ್ವರಿ ಷುಗರ್ಸ್‌ ಹಾಗೂ ಎನ್‌ಎಸ್‌ಎಲ್ (ಎಸ್‌ಸಿಎಂ) ಷುಗರ್ಸ್‌ ಕಂಪೆನಿಗಳು ವಿದ್ಯುತ್ ಹಾಗೂ ಮೊಲಾಸಿಸ್ ಉತ್ಪಾದಿಸುತ್ತಿವೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಲಿಮಿಟೆಡ್, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಚಾಮುಂಡೇಶ್ವರಿ  ಷುಗರ್ಸ್‌ (ಹೇಮಾವತಿ ಎಸ್‌ಎಸ್‌ಕೆ ಲಿಮಿಟೆಡ್) ಕಾರ್ಖಾನೆಗಳು ವಿದ್ಯುತ್, ಮೊಲಾಸಿಸ್ ಉತ್ಪಾದನೆ ಮಾಡುತ್ತಿಲ್ಲ.

ಒಂದು ಟನ್ ಕಬ್ಬಿನಿಂದ 100 ಕೆ.ಜಿ. ಸಕ್ಕರೆ, 145 ಕಿಲೋವಾಟ್ ವಿದ್ಯುತ್, 40 ಕೆ.ಜಿ ಮೊಲಾಸಿಸ್, 2 ಚೀಲ ಗೊಬ್ಬರ ಲಭ್ಯವಾಗುತ್ತಿದ್ದು, ಕಾರ್ಖಾನೆಗಳಿಗೆ 4200 ರೂಪಾಯಿ ಆದಾಯ ಬರುತ್ತಿದೆ. ಸಕ್ಕರೆ ಕಾಯ್ದೆಯಲ್ಲಿ ಉಪ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೂ ಪಾಲು ನೀಡಬೇಕು ಎಂದು  ಸೂಚಿಸಲಾಗಿದ್ದರೂ, ಕಾರ್ಖಾನೆಗಳು 1800 ರಿಂದ 2000 ರೂಪಾಯಿ ನೀಡುವ ಮೂಲಕ ಉಪ ಉತ್ಪನ್ನಗಳ ಲಾಭದಲ್ಲೂ ರೈತರಿಗೆ ಅನ್ಯಾಯ ಮಾಡುತ್ತಿವೆ.

ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಯಾದ 14 ದಿನಗಳೊಳಗೆ ರೈತರಿಗೆ ಹಣ ನೀಡಬೇಕು. 14 ದಿನ ಮೀರಿದರೆ ವಾರ್ಷಿಕ ಶೇ 15 ಬಡ್ಡಿ ಸಮೇತ ಪಾವತಿಸಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರೂ ನಿಗದಿತ ಸಮಯದ ಒಳಗೆ ಹಣ ಪಾವತಿಸುತ್ತಿಲ್ಲ ಎಂಬುದು ಕಬ್ಬು ಬೆಳೆಗಾರರ ಆರೋಪ.
(ಮುಂದುವರಿಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.