ಸಾಲಿಗ್ರಾಮ: ಕಾವೇರಿ ತೀರದ ಈ ಗ್ರಾಮದಲ್ಲಿ ಕೊಳಚೆ ನೀರು ರಸ್ತೆಯಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ. ರೋಗಗಳು ಹರಡುವ ಭಯವೂ ಇದೆ.
ಕೆ.ಆರ್.ನಗರ ತ್ಲ್ಲಾಲೂಕಿನ ಚುಂಚನಕಟ್ಟೆ ಗ್ರಾಮದ ಬವಣೆಯಿದು. ಜೀವನದಿ ಕಾವೇರಿಯಿದ್ದರೂ ಕೊಳವೆ ಬಾವಿ ನೀರನ್ನೇ ಜನ ಆಶ್ರಯಿಸಿದ್ದಾರೆ. ಗ್ರಾಮದ ಬಹುತೇಕ ಬೀದಿಗಳಿಗೆ ಚರಂಡಿ ಇಲ್ಲ. ಚರಂಡಿ ಇರುವ ಕಡೆ ಸ್ವಚ್ಛತೆ ನಿರ್ವಹಣೆ ಇಲ್ಲದಿರುವುದರಿಂದ ದುರ್ವಾಸನೆ ಬೀರುತ್ತಿದೆ. ಇದರಿಂದ ರೋಗಭಯವೂ ಆವರಿಸಿದೆ.
ಸ್ಥಳೀಯ ಆಡಳಿತವಾಗಲಿ ಅಥವಾ ಚುನಾಯಿತ ಪ್ರತಿನಿಧಿಗಳಾಗಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಶ್ರೀರಾಮ ಸಕ್ಕರೆ ಕಾರ್ಖಾನೆಗೆ ಹೋಗುವ ರಸ್ತೆಯ ಬಲ ಭಾಗದಲ್ಲಿ ಹಲವಾರು ಕುಟುಂಬಗಳು ಕಳೆದ ಹತ್ತಾರು ವರ್ಷಗಳಿಂದ ಗುಡಿಸಲುಗಳನ್ನು ನಿರ್ಮಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಇವರಿಗೆ ಸೂರು ಕಲ್ಪಿಸಲು ಇಲ್ಲಿಯ ತನಕ ಯಾವುದೇ ಚುನಾಯಿತ ಪ್ರತಿನಿಧಿಗಳು ಮುಂದಾಗಿಲ್ಲ. ಅಲ್ಲದೇ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಆಡಳಿತ ಉದಾಸೀನ ಮಾಡುತ್ತಿದೆ ಎಂದು ಗುಡಿಸಲು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
3 ವರ್ಷಗಳ ಹಿಂದೆ ರೂ 7 ಲಕ್ಷ ಅಂದಾಜು ವೆಚ್ಚದ ನೀರು ಸರಬರಾಜು ಯೋಜನೆ ಮಂಜೂರಾಗಿದೆ. ಹಣದ ಕೊರತೆ ಇಲ್ಲದಿದ್ದರೂ ಇಲ್ಲಿಯ ತನಕ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಸ್ಥಳೀಯ ಆಡಳಿತ ವಾರಕ್ಕೆ ಒಮ್ಮೆ ಮಾತ್ರ ಕೊಳವೆಬಾವಿ ನೀರು ಸರಬರಾಜು ಮಾಡುತ್ತಿದೆ.
ಚುಂಚನಕಟ್ಟೆ ಗ್ರಾಮ ಯಾತ್ರಾ ಸ್ಥಳವೂ ಹೌದು. ಸಾವಿರಾರು ಪ್ರವಾಸಿಗರು ಇಲ್ಲಿನ ಕೋದಂಡರಾಮ ದೇವಸ್ಥಾನಕ್ಕೆ ಬರುತ್ತಾರೆ. ಆದರೆ, ಇಲ್ಲಿ ಬಿಸಿಲು ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಬಸ್ ಶೆಲ್ಟರ್ ಸಹ ಇಲ್ಲ. ಯಾತ್ರಿಗಳು ಅಂಗಡಿಗಳ ಮುಂದೆ ನಿಂತು ಆಶ್ರಯ ಪಡೆಯಬೇಕಾದ ಸ್ಥಿತಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.