ADVERTISEMENT

ಪಿರಿಯಾಪಟ್ಟಣ ತಾಪಂ: ಮಹಾದೇವ್, ಗೀತಾ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:45 IST
Last Updated 10 ಫೆಬ್ರುವರಿ 2012, 10:45 IST

ಪಿರಿಯಾಪಟ್ಟಣ: ಸ್ಥಳೀಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಆರ್.ಎಸ್. ಮಹಾದೇವ್ ಮತ್ತು ಉಪಾಧ್ಯಕ್ಷರಾಗಿ ಬಿ.ಕೆ. ಗೀತಾ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಜೆಡಿಎಸ್ ತಾ.ಪಂ. ಅಧಿಕಾರವನ್ನು ಮುಂದುವರಿ ಸುವಂತಾಗಿದೆ.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮರುಚುನಾವಣೆ ನಡೆಯಿತು. 20 ಸದಸ್ಯ ಬಲದ ತಾ.ಪಂ.ನಲ್ಲಿ, ಜೆಡಿಎಸ್ 13 ಸದಸ್ಯರನ್ನು ಹೊಂದಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಜವರಪ್ಪ ಮತ್ತು ಉಪಾಧ್ಯಕ್ಷರಾಗಿದ್ದ ಎಚ್.ಕೆ. ಶೈಲಜಾ ಪಕ್ಷದ ಆಂತರಿಕ ಒಪ್ಪಂದದಂತೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಉಪವಿಭಾಗಾಧಿಕಾರಿ ಲಿಂಗಮೂರ್ತಿ ನೇತೃತ್ವದಲ್ಲಿ ಚುನಾವಣೆ  ಪ್ರಕ್ರಿಯೆ ನಡೆಸಲಾಯಿತು.

ಬಿಸಿಎಂ ಎ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆರ್.ಎಸ್. ಮಹಾದೇವ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಇದಕ್ಕೆ ಹಬಟೂರು ಕ್ಷೇತ್ರದ ಜೆಡಿಎಸ್ ಸದಸ್ಯೆ ಬಿ.ಕೆ. ಗೀತಾ ನಾಮಪತ್ರ ಸಲ್ಲಿಸಿದರು. ಉಳಿದಂತೆ ಯಾರೊಬ್ಬರು ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಘೋಷಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಮಹಾದೇವ್ ಮಾತನಾಡಿ, ರಾಜಕೀಯದಲ್ಲಿ ಪಕ್ಷಕ್ಕೆ ನಿಷ್ಠೆ ಮತ್ತು ತಾಳ್ಮೆ ಇದ್ದರೆ ಉತ್ತಮ ಭವಿಷ್ಯ ಕಾಣಲು ಸಾಧ್ಯ. ತಾ.ಪಂ. ಸದಸ್ಯರು ಯಾವುದೇ ಗೊಂದಲ್ಲವಿಲ್ಲದೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಇದೇ ನೀತಿಯನ್ನು ತಾಲ್ಲೂಕಿನ ಎಲ್ಲಾ ಜೆಡಿಎಸ್ ಚುನಾಯಿತ ಪ್ರತಿನಿಧಿಗಳು ಅನುಸರಿಸಬೇಕು ಎಂದು ತಿಳಿಸಿದರು.

ಅಧಿಕಾರದಿಂದ ಇಳಿದ ತಾ.ಪಂ. ಮಾಜಿ ಅಧ್ಯಕ್ಷ ಜವರಪ್ಪ ಮಾತನಾಡಿ, ಸದಸ್ಯರಾದ ಅತ್ತಹರ್ ಮತೀನ್ ಅವರ ಸಹಕಾರದಿಂದ ಯಾವುದೇ ಗೊಂದಲಕ್ಕೆ ಅವಕಾಶ ನೀಡಿದ ಎರಡನೇ ಅವಧಿಯಲ್ಲಿ ಜೆಡಿಎಸ್ ಅಧಿಕಾರದಲ್ಲಿ ಮುಂದುವರೆಯುತ್ತಿದೆ ಎಂದು ತಿಳಿಸಿದರು.

ವರಿಷ್ಠರು ಕೊಟ್ಟಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಆಡಳಿತ ನೀಡುವುದಾಗಿ ನೂತನ ಅಧ್ಯಕ್ಷ ಆರ್.ಎಸ್. ಮಹಾದೇವ್, ಉಪಾಧ್ಯಕ್ಷ ಬಿ.ಕೆ.ಗೀತಾ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾ ಎಂ.ಪಿ. ಚಂದ್ರೇಶ್, ಎಂ.ಕೆ. ಸುಚಿತ್ರ, ಎಸ್.ಎ. ಶಿವಣ್ಣ, ತಾ.ಪಂ. ಮಾಜಿ ಉಪಾಧ್ಯಕ್ಷೆ ಎಚ್.ಕೆ. ಶೈಲಜಾ, ಸದಸ್ಯರಾದ ಪ್ರಕಶ್, ಅತ್ತಹರ್ ಮತೀನ್, ರಘುನಾಥ್, ಯೋಗೀಶ್, ಶಂಕರೇಗೌಡ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಪಟ್ಟಣ ಪಂಚಾಯಿತಿ ತಿಮ್ಮನಾಯಕ, ಸದಸ್ಯರಾದ ಮಂಜುನಾಥ್‌ಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ವೇಣುಗೋಪಾಲ್, ಯುವ ಘಟಕದ ಅಧ್ಯಕ್ಷ ವಿದ್ಯಾಶಂಕರ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಘಟಕದ ಅಧ್ಯಕ್ಷ ಹೇಮಂತ್‌ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.