ADVERTISEMENT

ಮೈಸೂರು: ಜನಗಣತಿ ಕಾರ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 8:55 IST
Last Updated 10 ಫೆಬ್ರುವರಿ 2011, 8:55 IST

ಮೈಸೂರು:ಮಹಾನಗರ ಪಾಲಿಕೆ ವತಿಯಿಂದ ಬುಧವಾರ ನಡೆದ ಭಾರತದ ಜನಗಣತಿ-2011 ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ತಮ್ಮ ಕುಟುಂಬದ ಮಾಹಿತಿ ನೀಡುವುದರ ಮೂಲಕ ಚಾಲನೆ ನೀಡಿದರು.ಪಾಲಿಕೆಯವರು ವಿದ್ಯಾರಣ್ಯಪುರಂನಲ್ಲಿರುವ ಸಚಿವರ ಕಚೇರಿಗೆ ಮೊದಲು ಭೇಟಿ ನೀಡಿ, ಮಾಹಿತಿ ಪಡೆದು ಜನಗಣತಿ ಕಾರ್ಯವನ್ನು ಆರಂಭಿಸಿದರು. ನಂತರ ಮೇಯರ್ ಸಂದೇಶಸ್ವಾಮಿ ಹಾಗೂ ಶಾಸಕ ತನ್ವೀರ್ ಸೇಟ್ ಅವರ ಮನೆಗೆ ಭೇಟಿ ನೀಡಿ ಜನಗಣತಿ ನಡೆಸಲಾಯಿತು. ಜನಗಣತಿಯು ಫೆ.9ರಿಂದ ಮಾ.5ರವರೆಗೆ ಮೈಸೂರು ನಗರದಲ್ಲಿ ನಡೆಯಲಿದೆ.

ಜನಗಣತಿ ಕಾರ್ಯದಲ್ಲಿ ಪಾಲಿಕೆ ವಲಯ ಕಚೇರಿ-8ರ ಸಹಾಯಕ ಆಯುಕ್ತರಾದ ವಿಜಯ, ಕಂದಾಯ ಅಧಿಕಾರಿ ಎಸ್.ಎನ್.ಬಾಲಚಂದ್ರ, ಉಪಕಂದಾಯ ಅಧಿಕಾರಿ ಎಚ್.ಸಿ.ನಾಗೇಂದ್ರಪ್ಪ, ಸಾಂಖ್ಯಿಕ ಅಧಿಕಾರಿ ಪ್ರಕಾಶ್, ಕಂದಾಯ ಇಲಾಖೆ ಅಧೀಕ್ಷಕ ಕುಮಾರಸ್ವಾಮಿ ಇತರರು ಇದ್ದರು.

‘ದೇಶದ ಎನ್‌ಸೈಕ್ಲೊಪೀಡಿಯಾ’
ಜನಗಣತಿಯಿಂದ ದೇಶದ ಪ್ರಗತಿಯನ್ನು ದಶಕಕ್ಕೆ ಒಂದು ಬಾರಿ ಅಳೆಯಲಾಗುತ್ತದೆ. ಜನಸಂಖ್ಯೆ, ಜನರ ಶೈಕ್ಷ ಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಮತ್ತು ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮಟ್ಟ ಗುರುತಿಸಬಹುದು. ಪಂಚವಾರ್ಷಿಕ ಯೋಜನೆಗಳನ್ನು ಯಾವ ರೀತಿ ರೂಪಿಸಬೇಕು ಎಂಬುದನ್ನು ತಿಳಿಸುವ ಜನಗಣತಿ ಸಮಗ್ರ ಎನ್‌ಸೈಕ್ಲೊಪೀಡಿಯಾ ಇದ್ದಂತೆ.
 -ಎಸ್.ಎ.ರಾಮದಾಸ್,
 ಜಿಲ್ಲಾ ಉಸ್ತುವಾರಿ ಸಚಿವ

‘ನಾಗರಿಕರು ಸಹಕರಿಸಿ’
ಜನಗಣತಿ ದೇಶದ ಅಭಿವೃದ್ಧಿ ಮತ್ತು ಸದೃಢತೆಗೆ ಅವಶ್ಯಕ. ನಾಗರಿಕರು ಸೌಹಾರ್ದವಾಗಿ ಅಧಿಕಾರಿಗ ಳೊಂದಿಗೆ ಸಹಕರಿಸಿ, ಸಂಪೂರ್ಣ ಮಾಹಿತಿ ನೀಡಿ. ದೇಶದ ಉನ್ನತಿಗೆ ಕೈ ಜೋಡಿಸಿ. ಜೊತೆಗೆ ಅಧಿಕಾರಿಗಳು  ತಾಳ್ಮೆಯಿಂದ ಮಾಹಿತಿ ಸಂಗ್ರಹಿಸಬೇಕು.
 -ಸಂದೇಶಸ್ವಾಮಿ,ಮೇಯರ್

‘ಜನಗಣತಿ ವೇಳಾಪಟ್ಟಿ ಪ್ರಕಟಿಸಿ’
ನಾಗರಿಕರು ಸರಿಸಮಾನವಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಲು, ಸೌಲಭ್ಯಗಳನ್ನು ಪಡೆದುಕೊಳ್ಳಲು ಜನಗಣತಿ ಅವಶ್ಯಕವಾಗಿದೆ. ಕೇಂದ್ರ ಸರ್ಕಾರ 2004-05ರಲ್ಲೇ ಹಣ ಬಿಡುಗಡೆ ಮಾಡಿದೆ. ಆದರೂ ಪ್ರಶ್ನಾವಳಿ, ಅರ್ಜಿ ತಯಾರಿಸುವ ಕಾರ್ಯ ಕುಂಠಿತವಾಗಿತ್ತು. ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಅಧಿಕಾರಿಗಳು ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯಿಂದ ನಿರ್ವಹಿಸಬೇಕು. ಜೊತೆಗೆ ಜನಗಣತಿಯ ವೇಳಾಪಟ್ಟಿ (ಎಲ್ಲಿ? ಯಾವಾಗ?) ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
 -ತನ್ವೀರ್ ಸೇಟ್,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT