ADVERTISEMENT

ರಂಜಿಸಿದ ಗ್ರಾಮೀಣ ದಸರಾ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:20 IST
Last Updated 21 ಸೆಪ್ಟೆಂಬರ್ 2011, 6:20 IST

ಪಿರಿಯಾಪಟ್ಟಣ: ಗ್ರಾಮೀಣ ದಸರಾ ಆಯೋಜನೆಗೆ ಸೂಕ್ತ ಪ್ರಚಾರ ಕೊರತೆಯಿಂದ ಕಾರ್ಯಕ್ರಮದ ಉದ್ದೇಶ ಈಡೇರಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮೀಣ ದಸರಾ ಕ್ರೀಡಾಕೂಟವನ್ನು ರಾಗಿ ತುಂಬಿದ ಕುಕ್ಕೆ ಹೊತ್ತು ಓಡುವ ಮೂಲಕ ಉದ್ಘಾಟಿಸಿದ ಅವರು ನಂತರ ಮಾತನಾಡಿದರು.

ಸರ್ಕಾರದ ಯಾವುದೇ ಯೋಜನೆ ಯಶಸ್ಸಿಗೆ ಜನರ ಸಹಕಾರ ಅಗತ್ಯ. ದಸರಾ ಆಚರಣೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಸರಾ ಎನ್ನಿಸಿಕೊಳ್ಳದೆ ಜನತೆಯ ದಸರಾ ಎಂದು ಕರೆಯುವಂತೆ ಕಾರ್ಯಕ್ರಮ ಆಯೋಜಿಸಬೇಕಾದ ಅಗತ್ಯವಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ನಾಗೇಶ್ ಮಾತನಾಡಿ, ಗ್ರಾಮೀಣ ದಸರಾ ಆಚರಣೆಯ ವೇಳೆಯಲ್ಲಿ ರೈತ ಮಹಿಳೆಯರಿಗೆ ಮತ್ತು ಕೃಷಿಕರಿಗೆ ಹೆಚ್ಚಿನ ಜಮೀನು ಕೆಲಸ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಸೂಕ್ತ ಸಮಯದಲ್ಲಿ ಕ್ರೀಡಾಕೂಟ ಆಯೋಜಿಸ ಬೇಕು. ಮಹಿಳೆಯರು ನಾಚಿಕೆ ಸ್ವಭಾವ ತೊರೆದು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು. 

ತಹಶೀಲ್ದಾರ್ ಆರ್.ವಿ. ಶೈಲಜ ಮಾತನಾಡಿ, ನಿತ್ಯ ಜೀವನದ ಜಂಜಾಟ ಮರೆಯಲು ಇಂತಹ ಸ್ಪರ್ಧೆ ಅವಶ್ಯ. ಮನಸ್ಸಿಗೆ ಮುದ ನೀಡುವ ಗ್ರಾಮೀಣ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.

ವಿವಿಧ ಗ್ರಾಮೀಣ ಕ್ರೀಡೆಗಳನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಏರ್ಪಡಿಸಲಾಗಿತ್ತು. ಅನೇಕ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು. ಹಗ್ಗ ಜಗ್ಗಾಟ, ಗುಂಡು ಎತ್ತುವುದು, ಮೂಟೆ ಹೊತ್ತು ಓಡುವ ಸ್ಪರ್ಧೆಗಳು ನಡೆದವು.

ವಿಜೇತರಿಗೆ ಕ್ರಮವಾಗಿ ರೂ. 1500, 1000, ಮತ್ತು 500 ನಗದು ಬಹುಮಾನ ನೀಡಲಾಯಿತು. ಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. 

 ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಎಚ್.ಕೆ. ಶೈಲಜ, ತಾಲ್ಲೂಕು ಪಂಚಾಯಿತಿ ಸದಸ್ಯ ರಘುನಾಥ್, ತಾ.ಪಂ. ಇಓ ಡಾ.ಕೆ.ಎಣ. ಸದಾನಂದಪ್ಪ, ಬಿಇಓ ರಾಮಲಿಂಗು, ಕೃಷಿ ಇಲಾಖೆ ಎಡಿಎ ಕೆ. ರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.