ADVERTISEMENT

`ರಕ್ತದಾನದಿಂದ ಅಡ್ಡ ಪರಿಣಾಮವಿಲ್ಲ'

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:35 IST
Last Updated 15 ಜೂನ್ 2013, 6:35 IST

ಮೈಸೂರು: ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ತಪ್ಪದೇ ರಕ್ತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಮೇಗೌಡ ಕರೆ ನೀಡಿದರು.

ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದ ವೈದ್ಯರ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ `ವಿಶ್ವ ರಕ್ತದಾನಿಗಳ ದಿನಾಚರಣೆ-2013' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ರಕ್ತ ಎಲ್ಲರಿಗೂ ಅವಶ್ಯ. ಯಂತ್ರ, ಆಹಾರ ಸೇರಿದಂತೆ ಇತರೆ ವಸ್ತುಗಳನ್ನು ತಯಾರಿಸಬಹುದು. ಆದರೆ, ರಕ್ತವನ್ನು ಉತ್ಪಾದಿಸಲು ಆಗುವುದಿಲ್ಲ. ಇದೀಗ ಎಲ್ಲೆಡೆ ಡೆಂಗೆ ಜ್ವರ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ, ರಕ್ತದ ಅವಶ್ಯಕತೆ ಹೆಚ್ಚು ಇದೆ. ರಕ್ತವನ್ನು ದಾನ ಮಾಡುವ ಜೊತೆಗೆ ಇತರರು ರಕ್ತದಾನ ಮಾಡಲು ಅರಿವು ಮೂಡಿಸಬೇಕು' ಎಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಮಾತನಾಡಿ, `ಜಿಲ್ಲೆಗೆ 800ರಿಂದ 1 ಸಾವಿರ ಲೀಟರ್ ನಿತ್ಯ ರಕ್ತದ ಅವಶ್ಯವಿದೆ. ಪ್ರಸ್ತುತ 600-700 ಲೀಟರ್‌ನಷ್ಟು ಮಾತ್ರ ರಕ್ತ ದೊರಕುತ್ತಿದೆ. ಹಾಗಾಗಿ, ರಕ್ತದ ಕೊರತೆ ನೀಗಿಸಲು ಜನರು ಸ್ವಯಂಪ್ರೇರಿತರಾಗಿ, ನಿರ್ಭಯದಿಂದ ರಕ್ತದಾನ ಮಾಡಬೇಕು. 18 ವರ್ಷ ಮೇಲ್ಪಟ್ಟವರು, 50 ವರ್ಷ ಒಳಗಿನವರು, 50 ಕೆಜಿಗಿಂತ ಹೆಚ್ಚು ತೂಕ ಇರುವ ಆರೋಗ್ಯವಂತರು ರಕ್ತದಾನ ಮಾಡಬಹುದು. ರಕ್ತದಾನ ದಿನಾಚರಣೆಯಂದು ಮಾತ್ರ ರಕ್ತದಾನ ಮಾಡದೆ, ಉಳಿದ ದಿನಗಳಲ್ಲೂ ರಕ್ತದಾನ ಮಾಡಬೇಕು' ಎಂದು ಕರೆ ನೀಡಿದರು.

ಕೆ.ಆರ್. ಆಸ್ಪತ್ರೆ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಮಂಜುನಾಥ್ ಮಾತನಾಡಿ, `ಡೆಂಗೆ ಜ್ವರ ಕಾಣಿಸಿಕೊಂಡಿರುವುದರಿಂದ ನಗರದ 25-30 ಆಸ್ಪತ್ರೆಗಳಿಗೆ ಪ್ಲೇಟ್‌ಲೆಟ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ, ಪ್ಲೇಟ್‌ಲೆಟ್‌ಗೆ ಬೇಡಿಕೆ ಹೆಚ್ಚಾಗಿದೆ. ಎನ್‌ಎಸ್1 ಋಣಾತ್ಮಕ ಬರುವುದು ಡೆಂಗೆಯಿಂದ ಅಲ್ಲ. ಆದರೆ, ಡೆಂಗೆಯಿಂದ ಬರುತ್ತದೆ ಎಂಬ ಭಾವನೆಯನ್ನು ಬಿಡಬೇಕು. ಸಾಂಕ್ರಾಮಿಕ ರೋಗ, ಇತರೆ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು. ಜಿಲ್ಲೆಯಲ್ಲಿ ಶೇ 84ರಷ್ಟು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ. ಈ ಪ್ರಮಾಣ ಇನ್ನೂ ಹೆಚ್ಚಬೇಕು' ಎಂದು ಕರೆ ನೀಡಿದರು.

ಶಾಸಕ ವಾಸು, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎ. ಗೋಪಾಲ್, ಜಿಲ್ಲಾ  ಏಡ್ಸ್ ನಿಯಂತ್ರಣಾಧಿಕಾರಿ ಡಾ.ಟಿ. ರಘುಕುಮಾರ್, ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಎ. ಬಾಲಸುಬ್ರಹ್ಮಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ವಿದ್ಯಾಶಂಕರ್ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಡಿಎಚ್‌ಒ ಕಚೇರಿ ಆವರಣದಿಂದ ಹೊರಟ ಜಾಗೃತಿ ಜಾಥಾಕ್ಕೆ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ ಚಾಲನೆ ನೀಡಿದರು.

ನಜರ್‌ಬಾದ್, ಎಸ್ಪಿ ಕಚೇರಿ ವೃತ್ತ, ಥಿಯೊಬಾಲ್ಡ್ ರಸ್ತೆ, ಪೀರ್‌ಖಾನ್ ರಸ್ತೆ, ಸ್ಟೇಡಿಯಂ ರಸ್ತೆ, ಗೋಪಾಲಗೌಡ ಆಸ್ಪತ್ರೆ ವೃತ್ತ, ಸಾಹುಕಾರ್ ಚನ್ನಯ್ಯ ವೃತ್ತದಿಂದ ಶಾಲಿವಾಹನ ರಸ್ತೆ ಮೂಲಕ ಹಾದು ಡಿಎಚ್‌ಒ ಕಚೇರಿ ಆವರಣ ತಲುಪಿತು. ರಕ್ತಾದಾನಿಗಳಾದ ಲಿಂಗೇಶ್, ಜಯಕೃಷ್ಣ ಮತ್ತು ಗಣೇಶ್ ಅವರನ್ನು ಸನ್ಮಾನಿಸಲಾಯಿತು.

`ಬಡವರು, ಕಷ್ಟದಲ್ಲಿದ್ದವರಿಗೆ ರಕ್ತದಾನ'
`ನನ್ನ 20ನೇ ವಯಸ್ಸಿನಿಂದ ರಕ್ತ ನೀಡಲು ಆರಂಭಿಸಿದ್ದೇನೆ. ಇದುವರೆಗೆ 30 ಬಾರಿ ರಕ್ತದಾನ ಮಾಡಿದ್ದೇನೆ. ಕಷ್ಟದಲ್ಲಿದ್ದವರು ಮತ್ತು ಬಡವರಿಗೆ ರಕ್ತದಾನ ಮಾಡಲು ಮೊದಲ ಆದ್ಯತೆ ನೀಡುತ್ತೇನೆ'.

-ಇದು ಡಿಎಚ್‌ಒ ಕಚೇರಿ ಆವರಣದ ನಾಗಮ್ಮ ಹೆರಿಗೆ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಲಿಂಗೇಶ್ ಅವರ ಮನದಾಳದ ಮಾತು. 
`ಅಜ್ಜಿ ಆಸ್ಪತ್ರೆಗೆ ದಾಖಲಾಗಿದ್ದಾಗ ಮೊದಲು ರಕ್ತದಾನ ಮಾಡಿದೆ. ತದನಂತರದಲ್ಲಿ ರಕ್ತದಾನದ ಬಗ್ಗೆ ಆಸಕ್ತಿ ಹೆಚ್ಚಿತು. ಬಡವರು, ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ರಕ್ತದಾನ ಮಾಡುತ್ತಾ ಬಂದೆ. ವರ್ಷಕ್ಕೆ ಕನಿಷ್ಠ 2 ಬಾರಿ ರಕ್ತದಾನ ಮಾಡುತ್ತೇನೆ. ನನಗೀಗ 35 ವರ್ಷ. ರಕ್ತದಾನ ಮಾಡುತ್ತಾ ಬಂದಿರುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ' ಎಂದು ಹೇಳಿದರು.

`ತುಮಕೂರು ಜಿಲ್ಲೆಯ ಶಿರಾದಲ್ಲಿರುವ ನಿರ್ಮಲ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡವಾಗ ವೈದ್ಯೆ ನಿರ್ಮಲಾದೇವಿ ಅವರು ನನಗೆ ಪೋತ್ಸಾಹ ನೀಡಿದ್ದರು. ರೋಗಿಯೊಬ್ಬರಿಗೆ ತುರ್ತಾಗಿ ರಕ್ತ ಬೇಕಿತ್ತು. ರಕ್ತ ಕೊಟ್ಟು ಮೂರು ತಿಂಗಳಷ್ಟೆ ಆಗಿತ್ತು. ನಿರ್ಮಲಾದೇವಿ ಅವರ ಸಲಹೆ ಮೇರೆಗೆ ಮತ್ತೆ ರಕ್ತ ಕೊಟ್ಟೆ. ತುರ್ತು ಇದ್ದವರಿಗೆ, ಬಡ ಜನತೆಗೆ ಅಗತ್ಯ ಇದ್ದಲ್ಲಿ ರಕ್ತ ಕೊಡುತ್ತೇನೆ. ನೂರಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಬೇಕೆಂಬ ಬಯಕೆ ಇದೆ' ಎನ್ನುತ್ತಾರೆ ಇವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT