ADVERTISEMENT

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ: ರಾಜ್ಯಪಾಲರ ತೀವ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ಮೈಸೂರು: `ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಇದರಿಂದ ಆಡಳಿತ ನಿರ್ವಹಣೆಗೆ ತೊಡಕಾಗಿದೆ' ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

`1994ರಲ್ಲಿ ಎಸ್.ಆರ್. ಬೊಮ್ಮಾಯಿ ಪ್ರಕರಣ ಕುರಿತಂತೆ ಪ್ರಕಟಿಸಿದ ನಿಲುವು ತಮಗೆ ಗೊತ್ತಿದೆ. ಯಡಿಯೂರಪ್ಪ ಸರ್ಕಾರವಿದ್ದಾಗ ತಾವು ತೆಗೆದುಕೊಂಡಿದ್ದ ತೀರ್ಮಾನದಿಂದಾಗಿ ಪ್ರಮಾದವಾಗಿತ್ತು. ಮತ್ತೆ ಅಂಥದ್ದೇ ಪ್ರಮಾದ ಆಗಲು ತಾವು ಬಯಸುವುದಿಲ್ಲ' ಎಂದು ಸೋಮವಾರ  ಸುದ್ದಿಗಾರರಿಗೆ ತಿಳಿಸಿದರು.

`ಗೋಹತ್ಯೆ ನಿಷೇಧ ಕಾಯ್ದೆಗೆ 1964 ರಲ್ಲಿ ತಿದ್ದುಪಡಿ ತಂದು ಯಡಿಯೂರಪ್ಪ ಸರ್ಕಾರ ಹಿಂದೊಮ್ಮೆ ನನಗೆ ಕಳುಹಿಸಿದ್ದ ವಿಧೇಯಕವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿದಾಗ ತಿರಸ್ಕರಿಸಲಾಗಿತ್ತು. ರಾಜ್ಯ ಸರ್ಕಾರ ಮತ್ತೆ ಬೆಳಗಾವಿ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಿ, ನನ್ನ ಬಳಿ ಕಳುಹಿಸಿದೆ. ಅದನ್ನು ಪರಿಶೀಲಿಸುತ್ತೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಮೊಕದ್ದಮೆ ಸಂಬಂಧಿಸಿದಂತೆ ಕಡತಗಳ ಹೊರೆಯೇ ಇದೆ. ಈಶ್ವರಪ್ಪ ಅವರ ಕಡತವನ್ನು ಮುಖ್ಯಮಂತ್ರಿಗೆ   ಕಳುಹಿಸಿ ಸಲಹೆ ಪಡೆಯಲಾಗುವುದು. ಈ ಸಂಪುಟದಲ್ಲಿ ಇನ್ನೂ ಕೆಲವರ ವಿರುದ್ಧ ಮೊಕದ್ದಮೆಗಳಿವೆ' ಎಂದು ಸರ್ಕಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

`ಮೈಸೂರು ದಸರಾ ಪೂರ್ಣಗೊಳಿಸಿಕೊಂಡು ಬೆಂಗಳೂರಿಗೆ ಮರಳಿದಾಗ ಅಲ್ಲಿ ಕಸ ತುಂಬಿದ್ದನ್ನು ನೋಡಿ ಬೇಸರವಾಯಿತು. ಮುಂಬರುವ ಚುನಾವಣೆಯಲ್ಲಿ ತಮಗೆ ಎಂಥ  ಸರ್ಕಾರ ಬೇಕೆಂಬುದನ್ನು ಜನ ತೀರ್ಮಾನಿಸಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.