ADVERTISEMENT

ರಾಹುಲ್‌, ಮೋದಿ ಗುಲಾಮ ನಾನಲ್ಲ

ನರಸಿಂಹರಾಜ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 9 ಮೇ 2018, 11:00 IST
Last Updated 9 ಮೇ 2018, 11:00 IST

ಮೈಸೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ರಾತ್ರಿ ನಗರದ ನರಸಿಂಹರಾಜ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು.

ನರಸಿಂಹರಾಜ ಕ್ಷೇತ್ರದ ಗೌಸಿಯಾ ನಗರದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು. ಅಭ್ಯರ್ಥಿ ಅಬ್ದುಲ್‌ ಅಜೀಜ್‌ ಪರ ಮತಯಾಚಿಸಿದರು.

‘ಕಾಂಗ್ರೆಸ್‌ನವರು ನಮ್ಮ ಪಕ್ಷವನ್ನು ನಾಶ ಮಾಡಲು ಮುಂದಾಗಿದ್ದರು. ಹೀಗಾಗಿ, ಪಕ್ಷ ಉಳಿಸಿಕೊಳ್ಳುವ ಉದ್ದೇಶದಿಂದ ಅನಿವಾರ್ಯವಾಗಿ 2006ರಲ್ಲಿ ಬಿಜೆಪಿ ಜೊತೆ ಸರ್ಕಾರ ನಡೆಸಬೇಕಾಯಿತು. 20 ತಿಂಗಳ ಅವಧಿಯಲ್ಲಿ ಯಾವುದೇ ಕೋಮು ಸಂಘರ್ಷಕ್ಕೆ ಅವಕಾಶ ನೀಡಲಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

ADVERTISEMENT

‘ಜೆಡಿಎಸ್‌ನಲ್ಲಿ ಎಸ್‌ ಎಂದರೆ ಸಂಘ ಪರಿವಾರ. ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆದರೆ, ನಾವು ಕಾಂಗ್ರೆಸ್‌ ಪರವಾಗಿಯೂ ಇಲ್ಲ, ಬಿಜೆಪಿ ಪರವಾಗಿಯೂ ಇಲ್ಲ. ಮೋದಿ, ರಾಹುಲ್‌ ಗುಲಾಮ ನಾನಲ್ಲ. ನಾನು ಜನರ ಗುಲಾಮ. ರಾಜ್ಯದ ಆರೂವರೆ ಕೋಟಿ ಜನರ ಪರ ಇದ್ದೇವೆ. ಅವರ ರಕ್ಷಣೆಯೇ ನನ್ನ ಗುರಿ’ ಎಂದು ತಿಳಿಸಿದರು.

‘ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಹಾಗೂ ಹಿರಿಯರಿಗೆ ಆದ್ಯತೆ ನೀಡಲಾಗಿದೆ. ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ಬಡಬಗ್ಗರಿಗೆ ಆಸರೆಯಾಗಲು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ಮುಸ್ಲಿಮರು ಯಾವುದೇ ಕಾರಣಕ್ಕೆ ಭಯಪಡುವ ಅಗತ್ಯವಿಲ್ಲ. ನಿಮ್ಮ ರಕ್ಷಣೆಗೆ ಇದ್ದೇನೆ. ಬಿಜೆಪಿ ಜೊತೆ ಯಾವುದೇ ಸಂಬಂಧ ನನಗಿಲ್ಲ’ ಎಂದು ನುಡಿದರು.

ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರೊ.ಕೆ.ಎಸ್‌.ರಂಗಪ್ಪ ಪರ ಕುವೆಂಪು ವೃತ್ತದ ಬಳಿ ಮತಯಾಚಿಸಿದರು. ಬಳಿಕ ಕೃಷ್ಣರಾಜ ಕ್ಷೇತ್ರದ ವಿವೇಕಾನಂದ ವೃತ್ತದ ಬಳಿ ಕೆ.ವಿ.ಮಲ್ಲೇಶ್‌ ಪರ ಪ್ರಚಾರ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.