ADVERTISEMENT

ಲೋಕ ಅದಾಲತ್: 1784 ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 7:40 IST
Last Updated 6 ಫೆಬ್ರುವರಿ 2012, 7:40 IST

ನಂಜನಗೂಡು: ಕಳೆದ ಒಂದು ವರ್ಷದ ಅವಧಿಯಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಸುವ ಮೂಲಕ 1784 ಪ್ರಕರಣಗಳನ್ನು ರಾಜಿ, ಸಂಧಾನದಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಲೋಕ ಅದಾಲತ್‌ನಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ರಾಜ್ಯದಲ್ಲಿ ಮೈಸೂರು ಜಿಲ್ಲೆ 2ನೇ ಸ್ಥಾನ ಪಡೆದಿದೆ. ಅದೇ ರೀತಿ ನಂಜನಗೂಡು ತಾಲ್ಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಿದೆ ಎಂದರು.

590 ಸಿವಿಲ್ ವ್ಯಾಜ್ಯ, 464 ಕ್ರಿಮಿನಲ್ ಪ್ರಕರಣ, 421 ಜನನ/ ಮರಣ ಮೊಕದ್ದಮೆ, 249 ಚೆಕ್ ಬೌನ್ಸ್ ಪ್ರಕರಣ ಸೇರಿ 1784 ಪ್ರಕರಣಗಳನ್ನು ರಾಜಿಯಲ್ಲಿ ಅಂತ್ಯ ಗೊಳಿಸಲಾಗಿದೆ. ಇದರಿಂದ ತಾಲ್ಲೂಕಿನಲ್ಲಿ ವ್ಯಾಜ್ಯದ ಮೂಲಕ ಪರಸ್ಪರ ವೈರಿಗಳಾಗಿದ್ದ ಸುಮಾರು 5 ಸಾವಿರ ಜನರು ಸೋದರತ್ವ ಮತ್ತು ಶಾಂತಿಯ ಬಾಳ್ವೆ ನಡೆಸಲು ಸಹಕಾರಿಯಾಗಿದೆ. ಈ ಸಾಧನೆಗೆ ಕಂದಾಯ, ಪುರಸಭೆ, ಪೊಲೀಸ್, ಬ್ಯಾಂಕ್ ಅಧಿಕಾರಿಗಳು ಹಾಗೂ ವಕೀಲರು ಮತ್ತು ಸಿಬ್ಬಂದಿ ನೆರವಾಗಿದ್ದಾರೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ದೇವೇಂದ್ರಪಂಡಿತ್, ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಸಿದ್ದರಾಜು, ವಕೀಲ ಎಂ.ಜೆ.ಸೇತುರಾವ್, ಎಪಿಪಿ ಶಕೀಲ ಅಬೂಕರ್, ಉಷಾ ಮಾತನಾಡಿದರು.  ಮುಖ್ಯಾಧಿಕಾರಿ ಡಿ.ರಮೇಶ್, ಸಿಪಿಐ ಶಿವಸ್ವಾಮಿ, ಶಿರಸ್ತೇದಾರ್ ಕೆಂಪೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.