ADVERTISEMENT

ಶಾಲಾ ಹಂತದಲ್ಲಿ ಅಪರಾಧ ಜಾಗೃತಿ

ಹಿರಿಯ ಶ್ರೇಣಿ ನ್ಯಾಯಾಧೀಶ ಸಿ. ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:21 IST
Last Updated 4 ಸೆಪ್ಟೆಂಬರ್ 2013, 6:21 IST

ತಿ.ನರಸೀಪುರ:  ಶಾಲಾ ಹಂತದಲ್ಲಿಯೇ ವಿದ್ಯಾರ್ಥಿ ಗಳಲ್ಲಿ ಸಾಮಾಜಿಕ  ಜವಾಬ್ದಾರಿಯ ಬಗ್ಗೆ  ಶಿಕ್ಷಕರು ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಸಿ. ಚಂದ್ರಶೇಖರ್ ಅವರು ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ತಾಲ್ಲೂಕಿನ ಮೂಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ಕಾನೂನು ಅರಿವು ಕಾರ್ಯಾಗಾರ'ದಲ್ಲಿ ಮಾತನಾಡಿದರು. 

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕತೆ ದೂರವಾಗುತ್ತಿದೆ. ಅಪರಾಧ ಚಿಂತನೆಗಳು ಹಾಗೂ ಕೆಟ್ಟ ಆಲೋಚನೆಗಳು ಹೆಚ್ಚಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗಿರಬೇಕಾದ ಸಾಮಾಜಿಕ ಹೊಣೆಗಾರಿಕೆ ಕೂಡ ಇಲ್ಲವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಜವಾಬ್ದಾರಿ, ಉತ್ತಮ ಬದುಕು ಹಾಗೂ ಭವಿಷ್ಯ ಜೀವನದ ಬಗ್ಗೆ ಅರಿವು ಹಾಗೂ ಕಾನೂನಿನ ಕನಿಷ್ಠ ತಿಳುವಳಿಕೆಯ ಬಗ್ಗೆ ಅವರು ಅರ್ಥ ಮಾಡಿಸುವ ಮೂಲಕ ಅಪರಾಧ ನಿಯಂತ್ರಣಕ್ಕೆ ಶಿಕ್ಷಕರು ಮುಂದಾಗಬೇಕಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಅಧ್ಯಯನದ ಕಡೆ  ತಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಉನ್ನತ ವ್ಯಾಸಂಗ ಪಡೆದುಕೊಂಡು ಉದ್ಯೋಗಕ್ಕೆ ಸೇರಿ ಉತ್ತಮ ಜೀವನ ನಡೆಸಬೇಕು. ಕಾನೂನಿನ ಬಗ್ಗೆ ತಿಳಿದುಕೊಂಡು ಇತರರಲ್ಲೂ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ಮಾಡಿದರು.

ಕಿರಿಯ ಶ್ರೇಣಿ ನ್ಯಾಯಾಧೀಶ ಬಿ.ಜಿ. ದಿನೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಸ್. ಸುಂದರರಾಜ್, ಬಿಇಒ ಮರಿಸ್ವಾಮಿ, ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರಿ ಶೆಣೈ, ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ನಾಗಭೂಷಣಮೂರ್ತಿ,  ಪ್ರಕಾಶ್, ಪ್ರಾಂಶುಪಾಲ ಬಿ.ಮಹದೇವ, ಉಪ ಪ್ರಾಂಶುಪಾಲ ಜಗದೀಶ ಮೂರ್ತಿ, ಉಪನ್ಯಾಸಕ ಉದಯ್‌ಕುಮಾರ್,  ವಕೀಲ ಭುವನೇಶ್, ಶಿಕ್ಷಕರಾದ ಕೇಶವ್, ಶಂಕರ್, ಶಂಕರಯ್ಯ, ಎಚ್.ಜಿ. ಮಂಜುಳಾ, ಪಚ್ಚೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.