ಮೈಸೂರು: ಕಾವ್ಯ ಪ್ರಜ್ಞೆಯು ಸಾಹಿತ್ಯ ಸಂವೇದನೆಯನ್ನು ವಿಸ್ತರಿಸಲು ಸಹಕಾರಿಯಾಗಲಿ ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಸಲಹೆ ನೀಡಿದರು. ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಉದ್ಯಾನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಭಾನುವಾರ ಏರ್ಪಡಿಸಿದ್ದ ‘ಚಕೋರ ಕವಿ ಕಾವ್ಯ ವಿಚಾರ ವೇದಿಕೆ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಾವ್ಯ ಅಶಾಸ್ತ್ರೀಯವಾದರೂ ಲೋಕೋತ್ತರವಾದದು. ಕವಿ ಬೆಳದಿಂಗಳನ್ನು ಆಸ್ವಾಧಿಸಿ ಬಿಸಿಲನ್ನೂ ಹಿಡಿದಿಡಬೇಕು. ಪರಂಪರೆಯ ಪ್ರಜ್ಞೆ ಹೊಂದಿರಬೇಕು. ಧರ್ಮ ಹಾಗೂ ಸ್ವಧರ್ಮವನ್ನು ಪರೀಕ್ಷಿಸಬೇಕು. ಕಾವ್ಯದೊಂದಿಗೆ ಮಾತ್ರ ಭಾವಸಂವಾದ ನಡೆದರೆ ಸಾಲದು. ಬೌದ್ಧಿಕ ಹಾಗೂ ತಾತ್ವಿಕ ಸಂಘರ್ಷವೂ ನಡೆಯಬೇಕು’ ಎಂದು ಹೇಳಿದರು.
‘ವಿಮರ್ಶೆ, ಸಂಶೋಧನೆ ಸೇರಿ ಎಲ್ಲ ರೀತಿಯ ಬರವಣಿಗೆಯೂ ಸೃಜನಶೀಲ ಸಾಹಿತ್ಯ. ಪ್ರೇಮ ಪತ್ರಗಳೇ ಇದಕ್ಕೆ ನಿದರ್ಶನ. ಇತ್ತೀಚೆಗೆ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ವಿಮರ್ಶೆಯನ್ನು ಬರೆಯುವ ಹಾಗೂ ಓದುವವರು ಇನ್ನೂ ವಿರಳ. ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ವೇದಿಕೆಗಳ ಅಗತ್ಯವಿದೆ’ ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ವೇದಿಕೆಗೆ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.