ಸಾಲಿಗ್ರಾಮ: ತಾಲ್ಲೂಕಿನ ಹೊಸ ಅಗ್ರಹಾರ ಗ್ರಾಮದ ನಿವಾಸಿ, ರೈಲ್ವೆ ಪೊಲೀಸ್ ಎಚ್.ಪಿ.ಗೋಪಿಕೃಷ್ಣ (35) ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿ ಹಳಿಯೂರು ಗ್ರಾಮದ ಅಕ್ಷತಾ ಎಂಬುವರನ್ನು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಪದೇಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೆಲಸ ಮುಗಿಸಿಕೊಂಡು ಬಂದ ಗೋಪಿಕೃಷ್ಣ, ತಮ್ಮ ಜಮೀನಿಗೆ ಹೋಗಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.
ಭೇರ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
‘ಸೊಸೆ ಅಕ್ಷತಾ ಹಾಗೂ ಆಕೆಯ ತಂದೆ, ತಾಯಿ ಅವಮಾನ ಮಾಡುವ ಜತೆಗೆ ಮಾನಸಿಕ ಕಿರುಕುಳ ನೀಡಿದ್ದರು. ಇದರಿಂದ ಮನನೊಂದಿದ್ದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ, ಸೊಸೆ ಹಾಗೂ ಅವರ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮೃತರ ತಾಯಿ ಪದ್ಮಾ ಸಾಲಿಗ್ರಾಮ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆ: ಅಕ್ಷತಾ, ಅವರ ತಂದೆ–ತಾಯಿಯನ್ನು ಬಂಧಿಸುವಂತೆ ಒತ್ತಾಯಿಸಿ ಮೃತರ ಸಂಬಂಧಿಕರು ಭೇರ್ಯದಲ್ಲಿ ಹಾಸನ– ಮೈಸೂರು ಹೆದ್ದಾರಿ ತಡೆ ನಡೆಸಿದರು.
ಸಾಲಿಗ್ರಾಮ ಠಾಣೆ ಪಿಎಸ್ಐ ಮಹೇಶ್ ಹಾಗೂ ಕೆ.ಆರ್.ನಗರ ಸಿಪಿಐ ರಾಜು ಅವರು ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಮುಂದಾದರು. ಆದರೆ, ಪಟ್ಟುಬಿಡದೆ ಪ್ರತಿಭಟನೆ ಮುಂದುವರಿಸಿದರು. ಸುಮಾರು 2 ತಾಸು ಹೆದ್ದಾರಿ ಸಂಚಾರ ಬಂದ್ ಆಗಿತ್ತು. ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.