ADVERTISEMENT

ಪಕ್ಷಾಂತರಿಗಳಿಗೆ ಜೈಲು ಶಿಕ್ಷೆಯಾಗಲಿ: ವಾಟಾಳ್ ನಾಗರಾಜ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 13:11 IST
Last Updated 28 ಏಪ್ರಿಲ್ 2019, 13:11 IST
ಮೈಸೂರು ರೈಲು ನಿಲ್ದಾಣದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್
ಮೈಸೂರು ರೈಲು ನಿಲ್ದಾಣದಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್   

ಮೈಸೂರು: ‘ಪಕ್ಷಾಂತರಿಗಳ ಸದಸ್ಯತ್ವವನ್ನು ರದ್ದು ಮಾಡುವ ಜತೆಗೆ ಕನಿಷ್ಠ 2 ವರ್ಷ ಜೈಲು ಶಿಕ್ಷೆ ನೀಡಬೇಕು’ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಭಾನುವಾರ ಏಕಾಂಗಿ ಪ್ರತಿಭಟನೆ ನಡೆಸಿದ ನಾಗರಾಜ್‌, ‘ರಾಜ್ಯದಲ್ಲಿ ಪಕ್ಷಾಂತರಿಗಳ ಹಾವಳಿ ಹೆಚ್ಚಾಗಿದೆ. ಪಕ್ಷಾಂತರಿಗಳು ಶ್ವಾನಕ್ಕಿಂತ ಕಡೆ. ಅಲ್ಲದೇ, ಪಕ್ಷಾಂತರ ಈಗ ದಂದೆಯಾಗಿದೆ. ಇದು ಸಂವಿಧಾನ ಹಾಗೂ ಜನರಿಗೆ ಮಾಡುವ ಅಪಚಾರ. ಇದರಿಂದ ಆಡಳಿತಾಂಗ ದುರ್ಬಲವಾಗುತ್ತದೆ. ಹಾಗಾಗಿ, ಕೂಡಲೇ ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತರಬೇಕು. ಪಕ್ಷಾಂತರಿಗಳು ಜೀವನ ಪರ್ಯಂತ ಚುನಾವಣೆಗೆ ನಿಲ್ಲದಂತೆ ಮಾಡಬೇಕು. 10 ವರ್ಷ ಪಕ್ಷದಿಂದ ವಜಾ ಮಾಡಬೇಕು’ ಎಂದು ಕೋರಿದರು.

ಚುನಾವಣೆ ರದ್ದಾಗಲಿ: ರಾಜ್ಯದಲ್ಲಿ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ₹ 4 ಸಾವಿರ ಕೋಟಿ ಖರ್ಚು ಮಾಡಿವೆ. ಹೀಗಿದ್ದೂ ಚುನಾವಣಾ ಆಯೋಗ ಕುರುಡಾಗಿದೆ. ಹಾಗಾಗಿ, ಚುನಾವಣೆಯನ್ನು ರದ್ದುಪಡಿಸಿ, ಹೊಸತಾಗಿ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿದರು.

ADVERTISEMENT

ಹಿಂದೆ ಚುನಾವಣೆಗೆ ನಿಲ್ಲಲು ₹ 250 ಠೇವಣಿ ಇತ್ತು. ಈಗ ಅದನ್ನು ₹ 25 ಸಾವಿರಕ್ಕೆ ಏರಿಸಲಾಗಿದೆ. ಇದರಿಂದ ಜನಸಾಮಾನ್ಯರು ಚುನಾವಣೆಗೆ ನಿಲ್ಲುವುದು ಅಸಾಧ್ಯವಾಗಿದೆ. ಚುನಾವಣೆ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಮೂಡುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.