ADVERTISEMENT

ಮಧ್ಯವರ್ತಿಗಳ ಕಬಂಧಬಾಹುವಿನೊಳಗೆ ರೈತರು

ಚಿಲ್ಲರೆ ಮತ್ತು ಸಗಟು ಬೆಲೆಯ ನಡುವೆ ಭಾರಿ ಅಂತರ, ಬೆಳೆಗಾರರಿಗೆ ದಕ್ಕದ ಲಾಭ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 20:09 IST
Last Updated 5 ನವೆಂಬರ್ 2018, 20:09 IST

ಮೈಸೂರು: ಮಧ್ಯವರ್ತಿಗಳ ಕಬಂಧಬಾಹುವಿನೊಳಗೆ ರೈತರು ಸಿಲುಕಿದ್ದು, ಇದೀಗ ಅವರ ಆಕ್ರೋಶ ಭಾನುವಾರವಷ್ಟೇ ಆಸ್ಫೋಟಗೊಂಡಿದೆ. ತರಕಾರಿಗಳ ಬೆಲೆಗಳನ್ನು ಏಕಾಏಕಿ ಇಳಿಸಿರುವುದನ್ನು ಖಂಡಿಸಿ ಅವರು ಪ್ರತಿಭಟನೆ ನಡೆಸಿದ್ದಾರೆ.

ಮುಖ್ಯವಾಗಿ ಬೀನ್ಸ್ ಬೆಲೆಯಲ್ಲಿ ಒಂದೇ ದಿನದಲ್ಲಿ ₹ 5ರಷ್ಟು ಸಗಟು ಬೆಲೆಯಲ್ಲಿ ಕುಸಿತ ಕಂಡಿದ್ದು ರೈತರನ್ನು ನಿಬ್ಬೆರಗುಗೊಳಿಸಿದೆ. ಏನಿಲ್ಲ ಎಂದರೂ 2ರಿಂದ 3 ರೂಪಾಯಿನಷ್ಟು ಬೆಲೆ ಇಳಿಯುತ್ತಿತ್ತು. ಆದರೆ, ಒಮ್ಮೆಗೆ ಕೆ.ಜಿಗೆ ₹ 22ರಿಂದ ₹ 17ಕ್ಕೆ ಕಡಿಮೆಯಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಮಧ್ಯವರ್ತಿಗಳನ್ನು ಪ್ರಶ್ನಿಸಿದರೆ ಬೇಡಿಕೆ ಕಡಿಮೆಯಾದರೆ ಸಹಜವಾಗಿಯೇ ಬೆಲೆ ಇಳಿಯುತ್ತದೆ ಎಂದು ಅವರು ಹೇಳುತ್ತಾರೆ. ಕೇರಳದಿಂದ ಮೊದಲಿನಷ್ಟು ಬೇಡಿಕೆ ಈಗ ವ್ಯಕ್ತವಾಗುತ್ತಿಲ್ಲ. ಖರೀದಿದಾರರು ಇಲ್ಲದ ಮೇಲೆ ಬೆಲೆ ಇಳಿಯುತ್ತದೆ. ಬೇಡಿಕೆ ಹೆಚ್ಚಿದಾಗ ಸಹಜವಾಗಿಯೇ ಬೆಲೆಯೂ ಏರುತ್ತದೆ. ಬಹಳಷ್ಟು ಬಾರಿ ರೈತರಿಂದ ಖರೀದಿಸಿದ ತರಕಾರಿಗಳನ್ನು ಖರೀದಿಸುವವರು ಇಲ್ಲದೇ ತೀರಾ ಕಡಿಮೆ ಬೆಲೆಗೆ ಚಿಲ್ಲರೆ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದೇವೆ. ತರಕಾರಿಗಳು ಮಾರಾಟವಾಗದೇ ಕೊಳೆತಿವೆ. ಇದರಿಂದ ಉಂಟಾದ ನಷ್ಟವನ್ನು ನಮಗೆ ಯಾರು ತುಂಬಿಕೊಡುತ್ತಾರೆ ಎಂದು ಅವರು ಪ್ರಶ್ನಿಸುತ್ತಾರೆ.

ADVERTISEMENT

ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆಗಳು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಬೆಲೆ ಕುಸಿತದ ಲಾಭ ಒಂದೆಡೆ ಗ್ರಾಹಕರಿಗೆ ಲಭಿಸುತ್ತಿಲ್ಲ. ಮತ್ತೊಂದಡೆ ನಮಗೂ ಸಿಗುತ್ತಿಲ್ಲ. ಸಂಪೂರ್ಣ ಲಾಭ ವ್ಯಾಪಾರಸ್ಥರು ಹಾಗೂ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ರೈತರು ಆರೋಪಿಸುತ್ತಾರೆ.

ಎಲೆಕೋಸಿನ ದರವೂ ₹ 5 ಇದ್ದದ್ದು ಈ ವಾರ ₹ 4.5ಕ್ಕೆ ಮಾರಾಟವಾಗುತ್ತಿದೆ. ಎಲೆಕೋಸಿನ ಬೆಳೆಗಾರರಿಗಂತೂ ತೀರಾ ನಷ್ಟವಾಗುವಂತಹ ಪರಿಸ್ಥಿತಿ ಇದೆ. ಹಸಿಮೆಣಸಿನಕಾಯಿ ದರ ₹ 12ರಿಂದ 14, ನುಗ್ಗೆಕಾಯಿ ₹ 35ರಿಂದ 40, ಟೊಮೆಟೊ ₹ 07ರಿಂದ ₹ 08ಕ್ಕೆ ಏರಿಕೆಯಾಗಿದೆ.

ಬಾಳೆಹಣ್ಣಿನ ದರದಲ್ಲಿ ಈ ವಾರ ಸ್ವಲ್ಪ ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹ 44ಕ್ಕೆ ಏಲಕ್ಕಿ ಬಾಳೆಹಣ್ಣು ಸಿಗುತ್ತಿದೆ. ಪಚ್ಚಬಾಳೆ ₹ 18ರಲ್ಲೇ ಇದೆ. ಇನ್ನಿತರ ಮಾರುಕಟ್ಟೆಯಲ್ಲಿ ₹ 40ರಿಂದ ₹ 50ರವರೆಗೂ ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.