ADVERTISEMENT

ಮೈಸೂರು: ನಗರದಲ್ಲಿ ‘ವಿಶ್ವ ಶ್ರವಣ ದಿನಾಚರಣೆ’

ಮಕ್ಕಳಿಂದ ಜಾಥಾ, ಕೆಲವೆಡೆ ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 3:51 IST
Last Updated 4 ಮಾರ್ಚ್ 2021, 3:51 IST
ಜನತಾನಗರದಲ್ಲಿರುವ ‘ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್’ ನಡೆಸುತ್ತಿರುವ ‘ಇನ್‌ಸ್ಟಿಟ್ಯೂಟ್‌ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆ’ ವತಿಯಿಂದ ಮೈಸೂರಿನಲ್ಲಿ ವಿದ್ಯಾರ್ಥಿಗಳು ಶ್ರವಣ ಜಾಗೃತಿ ಜಾಥಾ ನಡೆಸಿದರು
ಜನತಾನಗರದಲ್ಲಿರುವ ‘ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್’ ನಡೆಸುತ್ತಿರುವ ‘ಇನ್‌ಸ್ಟಿಟ್ಯೂಟ್‌ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆ’ ವತಿಯಿಂದ ಮೈಸೂರಿನಲ್ಲಿ ವಿದ್ಯಾರ್ಥಿಗಳು ಶ್ರವಣ ಜಾಗೃತಿ ಜಾಥಾ ನಡೆಸಿದರು   

ಮೈಸೂರು: ನಗರದಲ್ಲಿ ಹಲವೆಡೆ ಬುಧವಾರ ವಿಶ್ವ ಶ್ರವಣ ದಿನಾಚರಣೆಯನ್ನು ಆಚರಿಸಲಾಯಿತು.

ಇಲ್ಲಿನ ಜನತಾನಗರದಲ್ಲಿರುವ ‘ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್’ ನಡೆಸುತ್ತಿರುವ ‘ಇನ್‌ಸ್ಟಿಟ್ಯೂಟ್‌ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆ’ ವತಿಯಿಂದ ನಗರದಲ್ಲಿ ವಿದ್ಯಾರ್ಥಿಗಳು ತರಳಬಾಳು ವೃತ್ತದವರೆಗೆ ಶ್ರವಣ ಜಾಗೃತಿ ಜಾಥಾ ನಡೆಸಿದರು.

‘ಬೇಗನೇ ಕಿವಿ ಪರೀಕ್ಷೆ ಮಾಡಿಸಿಕೊಳ್ಳಿ, ಒಳ್ಳೆಯ ಫಲ ನಿರೀಕ್ಷಿಸಿ’, ‘ಅತೀ ಶಬ್ದ, ಕಿವಿ ಸ್ತಬ್ದ’, ‘ಕಿವಿ ರಕ್ಷಣೆ ಬಗ್ಗೆ ಅರಿವಿರಲಿ, ಕಿವಿ ಪರೀಕ್ಷೆ ಬಗ್ಗೆ ತಿಳಿದಿರಲಿ’, ‘ನೋಡಿದ್ದು ಅರೆ ಘಳಿಗೆ, ಕೇಳಿದ್ದು ಕೊನೆವರೆಗೆ’ ಮೊದಲಾದ ಫಲಕಗಳನ್ನಿಡಿದ ಮಕ್ಕಳು ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು. ಅಲ್ಲಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಸಾರ್ವಜನಿಕರಲ್ಲಿ ಕಿವಿ ರಕ್ಷಣೆ ಕುರಿತು ಅರಿವು ಮೂಡಿಸಿದರು.

ADVERTISEMENT

ಜಾಥಾಗೆ ಪಿಎಡಿಸಿ ಕಾರ್ಯದರ್ಶಿ ಎ.ದಿನಕರಶೆಟ್ಟಿ ಚಾಲನೆ ನೀಡಿದರು. ಮಕ್ಕಳು, ತಾಯಂದಿರು, ಶಿಕ್ಷಕಿಯರು, ಸಂಸ್ಥೆಯ ಪದಾಧಿಕಾರಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ವಾಕ್‌ ಶ್ರವಣ ಸಂಸ್ಥೆಯಲ್ಲಿ ನೇರ ಫೋನ್‌ಇನ್‌ ಕಾರ್ಯಕ್ರಮ: ಇಲ್ಲಿನ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ ಶ್ರವಣದೋಷ ಕುರಿತು ನೇರ ಫೋನ್‌ಇನ್‌ ಕಾರ್ಯಕ್ರಮ ನಡೆಯಿತು.

ಶ್ರವಣ ವಿಜ್ಞಾನ ತಜ್ಞರಾದ ಡಾ.ಅಜಿತ್‌ಕುಮಾರ್, ಇಎನ್‌ಟಿ ತಜ್ಞರಾದ ಡಾ.ಜಿ.ರಾಜೇಶ್ವರಿ, ಟೆಲಿಕೇಂದ್ರದ ಮುಖ್ಯಸ್ಥರಾದ ಡಾ.ಜಯಶ್ರೀ ಸಿ.ಶಾನ್‌ಭಾಗ್‌ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಫೋನ್‌ಇನ್‌ ಕಾರ್ಯಕ್ರಮವು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರವಾಯಿತು.

ವಿಶೇಷ ಉಪನ್ಯಾಸ‌: ಇಲ್ಲಿನ ಜಿಲ್ಲಾ ಅಂಗವಿಕಲರ ಪುನವರ್ಸತಿ ಕೇಂದ್ರದಲ್ಲಿ ಬುಧವಾರ ಎಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆಯ ಹಿರಿಯ ವೈದ್ಯ ಡಾ.ದಿವಾಕರ್ ಶ್ರವಣ ದೋಷ ಕುರಿತು ವಿಶೇಷ ಉಪನ್ಯಾಸ ನೀಡಿದರು.‌

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೆ.ಪದ್ಮ ಮಾತನಾಡಿ, ‘ಬೇಗ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಶ್ರವಣದೋಷವನ್ನು ಕಡಿಮೆ ಮಾಡಬಹುದು. ಗರ್ಭಿಣಿಯರು ಸೂಕ್ತ ಆರೈಕೆಯಲ್ಲಿರಬೇಕು’ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ 5 ಮಂದಿಗೆ ಶ್ರವಣ ಯಂತ್ರವನ್ನು ವಿತರಿಸಲಾಯಿತು. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಡಾ.ಗುರುಮೂರ್ತಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಮಾಲಿನಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.