ಮೈಸೂರು: ಬೆಟ್ಟದತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಇಂದು ವಿವಿಧ ರಾಜಕೀಯ ಪಕ್ಷಗಳ ನಾಯಕರು ಭೇಟಿ ನೀಡಿ, ದೇವಿಯ ಆಶೀರ್ವಾದ ಪಡೆದರು.
ಬೆಳ್ಳಂಬೆಳಿಗ್ಗೆ ಬೆಟ್ಟಕ್ಕೆ ಬಂದಿದ್ದಅನರ್ಹ ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ದೇವಿಗೆ ನಮಸ್ಕಾರ ಮಾಡಿ, ‘ರಾಜಕೀಯ ಮಾತಾಡಲ್ಲ’ ಎಂದು ಹಿಂದಿರುಗಿದ್ದರು.
ನಂತರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ದೇಗುಲಕ್ಕೆ ಬಂದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ದೇವಿಗೆ ಅರ್ಚನೆ ಮಾಡಿಸಿದರು. ಈ ಸಂದರ್ಭ ಅವರು ಸೋನಿಯಾ ಗಾಂಧಿ ಅವರ ಆರೋಗ್ಯ ಸುಧಾರಿಸಲಿ ಎಂದು ಸಂಕಲ್ಪ ಮಾಡಿದರು.
ನಂಜನಗೂಡಿನಿಂದ ಚಾಮುಂಡಿಬೆಟ್ಟಕ್ಕೆ ಬಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಹ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಮಾಡಿಸಿದರು.
ದೇವೇಗೌಡರು ಬಂದಾಗ ದೇಗುಲದಎದುರು 101 ಈಡುಗಾಯಿ ಒಡೆಯುತ್ತಿದ್ದ ಡಿ.ಕೆ.ಶಿವಕುಮಾರ್, ತಕ್ಷಣ ಅವರತ್ತ ಧಾವಿಸಿ ಕಾಲಿಗೆ ನಮಸ್ಕರಿಸಿ ಕುಶಲ ವಿಚಾರಿಸಿದರು. ಈ ಸಂದರ್ಭ ಜಿ.ಟಿ.ದೇವೇಗೌಡರು ಸುತ್ತಮುತ್ತ ಕಾಣಿಸಲಿಲ್ಲ.
‘ನಾಡದೇವತೆ ಚಾಮುಂಡೇಶ್ವರಿ ದುಃಖ ದೂರ ಮಾಡುವ ದೇವಿ. ದುರ್ಗೆಯ ಸ್ವರೂಪ.ಪಕ್ಷ ಭೇದ ಮರೆತು ರಾಜ್ಯಕ್ಕೆ ಎಲ್ಲ ಜನರಿಗೂ ಒಳ್ಳೇದಾಗಲಿ ಅಂತ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನಿನ್ನೆ ಗುರುವಾರ ನಂಜುಂಡೇಶ್ವರ, ದತ್ತಾತ್ರೇಯನ ದರ್ಶನ ಮಾಡಿದೆ. ಇಂದು ಚಾಮುಂಡೇಶ್ವರಿ ದರ್ಶನ ಭಾಗ್ಯ ಸಿಕ್ಕಿದೆ. ಕಷ್ಟ ನಿವಾರಣೆ ಆಗಲಿ ಅಂತಪ್ರಾರ್ಥನೆ ಮಾಡಿಕೊಂಡೆ’ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.