ಮೈಸೂರು: ಚಾಮುಂಡಿ ಬೆಟ್ಟದ ತಿರುವಿನಲ್ಲಿ ಕೆಎಸ್ಆರ್ಟಿಸಿ ಸಾರಿಗೆ ಬಸ್ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
‘ನಗರ ಬಸ್ ನಿಲ್ದಾಣದಿಂದ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದ ಬಸ್ ಬೆಟ್ಟದ ಮಧ್ಯ ಭಾಗದ ರಸ್ತೆಯಲ್ಲಿನ ಗೆಸ್ಟ್ ಹೌಸ್ ಬಳಿ ಗುರುವಾರ ಸಂಜೆ ಮಗುಚಿ ಬಿದ್ದಿದೆ. ಅದರಲ್ಲಿ 10 ಮಂದಿ ಪ್ರಯಾಣಿಕರಿದ್ದು, ಒಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು, ಬಸ್ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ಕರೆ ತಂದು ರಕ್ಷಿಸಿದರು’ ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಬಂದ ಪೊಲೀಸರು, ಬಸ್ ತೆರವುಗೊಳಿಸಿ ಗಾಯಗೊಂಡಿದ್ದ ಪ್ರಯಾಣಿಕನನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದರು. ಅಪಘಾತದಿಂದ ಕೆಲ ಕಾಲ ಬೆಟ್ಟದ ರಸ್ತೆಯಲ್ಲಿ ಸಂಚಾರ ವ್ಯತ್ಯಯಗೊಂಡಿತು. ಕೆ.ಆರ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ: ಪ್ರಕರಣ ದಾಖಲು
ಮೈಸೂರು: ಯುವತಿಗೆ ಮೇಸೆಜ್ ಮಾಡಿದ ವಿಚಾರವಾಗಿ ಶಾರದಾದೇವಿ ನಗರದಲ್ಲಿ ಎರಡು ಯುವಕರ ಗುಂಪಿನ ನಡುವೆ ಜಗಳವಾಗಿದ್ದು, ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾರದಾದೇವಿ ನಗರದ ಅಭಿಲಾಷ್, ವಿನೋದ್, ಗುರು ಹಲ್ಲೆಗೊಳಗಾಗಿದ್ದು, ಹಲ್ಲೆ ನಡೆಸಿದ ಕಾರ್ತಿಕ್, ಅರ್ಜುನ, ಪ್ರಶಾಂತ್, ಗುರು, ತರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.
‘ವಿನೋದ್ ತನಗೆ ಪರಿಚಯವಿದ್ದ ಯುವತಿಗೆ ಮೆಸೇಜ್ ಮಾಡಿದ್ದಾನೆ. ಆ ಯುವತಿ ತಾನು ಪ್ರೀತಿಸುತ್ತಿದ್ದ ಕಾರ್ತಿಕ್ಗೆ ವಿಚಾರ ತಿಳಿಸಿದ್ದಾಳೆ. ಇದರಿಂದ ಗುಂಪು ಕಟ್ಟಿಕೊಂಡು ಬಂದ ಕಾರ್ತಿಕ್ ಶಾರದಾದೇವಿ ನಗರದ ಬ್ಯಾಂಕರ್ಸ್ ಕ್ಲಬ್ ಬಳಿ ಅಭಿಲಾಷ್, ವಿನೋದ್, ಗುರು ಅವರೊಂದಿಗೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.