ADVERTISEMENT

ವಕಾಲತು ವಹಿಸಿದರೆ ಅಮಾನತು; ವಕೀಲರ ಸಂಘ ಎಚ್ಚರಿಕೆ

ಫ್ರೀ ಕಾಶ್ಮೀರ ಫಲಕ ವಿವಾದ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 9:42 IST
Last Updated 20 ಜನವರಿ 2020, 9:42 IST

ಮೈಸೂರು: ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಆರೋಪಿಗಳ ಪರವಾಗಿ ವಕಾಲತು ವಹಿಸಿದರೆ ಅವರನ್ನು ಸಂಘದಿಂದ ಅಮಾನತುಗೊಳಿಸುವ ತೀರ್ಮಾನವನ್ನು ಇಲ್ಲಿ ಸೋಮವಾರ ನಡೆದ ಜಿಲ್ಲಾ ವಕೀಲರ ಸಂಘದ ಸಾಮಾನ್ಯ ಸಭೆ ಕೈಗೊಂಡಿತು.

‘ವಕಾಲತು ವಹಿಸಬಾರದು ಎಂದು ಸಂಘದ ಕಾರ್ಯಕಾರಿ ಸಮಿತಿ ಕೈಗೊಂಡಿದ್ದ ತೀರ್ಮಾನವನ್ನು ಸಾಮಾನ್ಯ ಸಭೆ ಮಾನ್ಯ ಮಾಡಿದೆ. ಜತೆಗೆ, ವಕಾಲತು ವಹಿಸಿದವರನ್ನು ಅಮಾನತುಗೊಳಿಸಬೇಕು ಎಂಬ ನಿರ್ಣಯವನ್ನು ಬಹುಮತದ ಆಧಾರದ ಮೇಲೆ ಕೈಗೊಳ್ಳಲಾಗಿದೆ’ ಎಂದು ಸಂಘದ ಕಾರ್ಯದರ್ಶಿ ಬಿ.ಶಿವಣ್ಣ ‘ಪ‍್ರಜಾವಾಣಿ’ಗೆ ತಿಳಿಸಿದರು.

ಸುಮಾರು 500ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ 3ರಿಂದ 4 ಮಂದಿಯಷ್ಟೇ ತೀರ್ಮಾನದ ವಿರುದ್ಧ ದನಿ ಎತ್ತಿದರು. ಉಳಿದ ಎಲ್ಲರೂ ತೀರ್ಮಾನದ ಪರವಾಗಿದ್ದರು. ಹಾಗಾಗಿ, ಬಹುಮತದ ಆಧಾರದ ಮೇಲೆ ನಿರ್ಣಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಹಿಡಿದು ವಿವಾದಕ್ಕೆ ಒಳಗಾದ ಬಿ.ನಳಿನಿ, ಪ್ರತಿಭಟನೆಯ ಆಯೋಜಕರಾದ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಹಾಗೂ ಇತರ ಆರೋಪಿಗಳ ಪರವಾಗಿ ವಕಲಾತು ವಹಿಸಲು ಬೆಂಗಳೂರಿನಿಂದ ಬಂದಿರುವ ಜಗದೀಶ್‌ ನೇತೃತ್ವದ ವಕೀಲರ ತಂಡವು ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ವಿಚಾರಣೆಯನ್ನು ನ್ಯಾಯಾಲಯವು ಮಧ್ಯಾಹ್ನ 3ಕ್ಕೆ ಮುಂದೂಡಿದೆ.

ನಳಿನಿ ಈಗಾಗಲೇ ಪಡೆದಿರುವ ನಿರೀಕ್ಷಣಾ ಜಾಮೀನಿಗೆ ಪ‍ಬ್ಲಿಕ್ ಪ್ರಾಸಿಕ್ಯೂಟರ್ ಆನಂದಕುಮಾರ್ ಸೋಮವಾರ ಆಕ್ಷೇಪ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.