ADVERTISEMENT

‘ಉಪ್ಪಾರರ ಇತಿಹಾಸವೂ ಸಾಕಷ್ಟಿದೆ’

ರಾಷ್ಟ್ರೀಯ ಉಪ್ಪು ತಯಾರಕರ ಮತ್ತು ಮಾರಾಟಗಾರರ ಒಕ್ಕೂಟದ ಕಾರ್ಯದರ್ಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 3:03 IST
Last Updated 11 ಜನವರಿ 2021, 3:03 IST
ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ 25ನೇ ವಾರ್ಷಿಕ ಪ್ರತಿಭಾ ಪುರಸ್ಕಾರದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು
ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ 25ನೇ ವಾರ್ಷಿಕ ಪ್ರತಿಭಾ ಪುರಸ್ಕಾರದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು   

ಮೈಸೂರು: ‘ಉಪ್ಪಾರ ಸಮುದಾಯದ ಇತಿಹಾಸ ಸಾಕಷ್ಟಿದೆ. ರುಚಿಗೆ ಅಗತ್ಯವಿರುವ ಉಪ್ಪನ್ನು ಆವಿಷ್ಕರಿಸಿ, ತಯಾರಿಸುವ ನಮ್ಮ ಸಮಾಜಕ್ಕೆ ಮೊದಲ ನೊಬೆಲ್‌ ಪ್ರಶಸ್ತಿ ಸಿಗಬೇಕಿತ್ತು’ ಎಂದು ರಾಷ್ಟ್ರೀಯ ಉಪ್ಪು ತಯಾರಕರ ಮತ್ತು ಮಾರಾಟಗಾರರ ಒಕ್ಕೂಟದ ಕಾರ್ಯದರ್ಶಿ ನೋನಿಯಾ ಕೃಷ್ಣಕುಮಾರ್‌ ಭಾರತಿ ಹೇಳಿದರು.

ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ 25ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ನಿವೃತ್ತ/ಬಡ್ತಿ ಹೊಂದಿದ ನೌಕರರು, ಸಾಧಕರು ಮತ್ತು ಸಮಾಜ ಸೇವಕರಿಗೆ ಭಾನುವಾರ ನಗರದ ಕಲಾಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಉಪ್ಪಾರರ ಇತಿಹಾಸವನ್ನು ಬಣ್ಣಿಸಿದರು.

‘1857ರಲ್ಲಿ ನಡೆದ ಸಿಪಾಯಿ ದಂಗೆಯನ್ನೇ ಇಂದಿಗೂ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟ ಎಂದೇ ಬಿಂಬಿಸಲಾಗುತ್ತಿದೆ. ಆದರೆ 1770ರಿಂದ 1800ರವರೆಗೂ ಸತತ ಮೂರು ದಶಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು ಉಪ್ಪಾರರು. ಇದು ಎಲ್ಲೂ ದಾಖಲಾಗದಿದ್ದರಿಂದ ಹಾಗೂ ಬ್ರಾಹ್ಮಣರು ತಮ್ಮವರ ಹೋರಾಟವನ್ನು ಮಾತ್ರ ದಾಖಲಿಸಿ, ಎಲ್ಲೆಡೆ ಪ್ರಚುರಪಡಿಸಿದ್ದರಿಂದ ಉಪ್ಪಾರರ ಸ್ವಾತಂತ್ರ್ಯ ಹೋರಾಟ ಬೆಳಕಿಗೆ ಬರಲಿಲ್ಲ’ ಎಂದು ಕೃಷ್ಣಕುಮಾರ್‌ ಭಾರತಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸಿಪಾಯಿ ದಂಗೆಯಲ್ಲೂ ಉಪ್ಪಾರರು ಭಾಗಿಯಾಗಿದ್ದರು. ಈ ಹೋರಾಟ ಹತ್ತಿಕ್ಕಲಿಕ್ಕಾಗಿಯೇ ಬ್ರಿಟಿಷರು, ಉತ್ತರ ಭಾರತದ ಹೌಜ್‌ ಗ್ರಾಮದಲ್ಲಿ 15 ಜನ ಉಪ್ಪಾರ ಸಮುದಾಯದವರನ್ನು ಒಂದೇ ಮರಕ್ಕೆ ನೇಣು ಹಾಕಿದ್ದರು. 1942ರ ಕ್ವಿಟ್‌ ಇಂಡಿಯಾ ಚಳವಳಿಯಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ಹಲವರು ಹುತಾತ್ಮರಾಗಿದ್ದಾರೆ’ ಎಂದು ತಮ್ಮ ಸಮುದಾಯದವರ ಹೋರಾಟವನ್ನು ನೆನಪು ಮಾಡಿಕೊಂಡರು.

‘ಬ್ರಿಟಿಷರು ನಡೆಸಿದ್ದ 1881ರ ಜನಗಣತಿಯಲ್ಲಿ ಉಪ್ಪಾರರು ದೇಶದ ಸಿರಿವಂತ ಸಮುದಾಯ ಎಂಬುದನ್ನು ನಮೂದಿಸಿದ್ದಾರೆ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ನಿಜವಾದ ನಾಯಕರು ಉಪ್ಪಾರರೇ’ ಎಂದು ಕೃಷ್ಣಕುಮಾರ್‌ ಹೇಳಿದರು.

ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಅಯ್ಯನ ಸರಗೂರು ಮಠದ ಚಿನ್ನಸ್ವಾಮೀಜಿ, ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ಅಧ್ಯಕ್ಷ ಆರ್‌.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಮೈಸೂರು, ಚಾಮರಾಜನಗರ, ಮಂಡ್ಯ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಉಪ್ಪಾರ ಸಮಾಜದ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.